ಬೆಳಗಾವಿ: ‘ಕೇಬಲ್ ಡಿಜಿಟಲೈಜೇಶನ್ ಕೆಲಸ ಈಗಾಗಲೆ ದೇಶದ 4 ಮೆಟ್ರೋ ಮತ್ತು 38 ಮಹಾನಗರಗಳಲ್ಲಿ ಪೂರ್ಣಗೊಂಡಿದೆ. 2014ರ ಡಿಸೆಂಬರ್ ಒಳಗೆ ದೇಶದ ಇತರೆ ಭಾಗಗಳಲ್ಲಿ ಕೇಬಲ್ ಡಿಜಿಟಲೈಜೇಶನ್ ಪೂರ್ಣಗೊಳ್ಳಲಿದೆ’ ಎಂದು ಕರ್ನಾಟಕ ಮತ್ತು ಕೇರಳ ರಾಜ್ಯಗಳ ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರದ ಮುಖ್ಯಸ್ಥ ಡಾ. ಸಿಬಿಚೆನ್ ಕೆ.ಮ್ಯಾಥ್ಯೂ ಹೇಳಿದರು.
ಇಲ್ಲಿನ ಇಫಾ ಹೊಟೇಲ್ನಲ್ಲಿ ಶುಕ್ರವಾರ ಪ್ರಾಧಿಕಾರವು ದೂರಸಂಪರ್ಕ ಗ್ರಾಹಕರ ಹಕ್ಕು ಮತ್ತು ಸವಲತ್ತುಗಳ ಬಗ್ಗೆ ಜಾಗೃತಿ ಮೂಡಿಸಲು ಆಯೋಜಿಸಿದ್ದ ಗ್ರಾಹಕರ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಇಂತಹ ಡಿಜಿಟಲೈಜೇಶನ್ದಿಂದ ಗ್ರಾಹಕರು ಬ್ರಾಡ್ಬ್ಯಾಂಡ್ ಸೇರಿದಂತೆ ವಿವಿಧ ಮೌಲ್ಯವರ್ಧಿತ ಸೇವೆಗಳನ್ನು ಪಡೆಯಬಹುದು ಎಂದರು.
ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡಲು ಪ್ರಾಧಿಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರ ನೀಡಿದ ಅವರು, ಗ್ರಾಹಕರ ಹಕ್ಕು ಮತ್ತು ಸವಲತ್ತುಗಳು ಹಾಗೂ ಸೇವಾ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಸೇವೆಯನ್ನು ಹೇಗೆ ಪೂರೈಸಬೇಕು ಎಂಬುದರ ಬಗ್ಗೆ ಅವರು ಮಾಹಿತಿ ನೀಡಿದರು.
ಪ್ರಾಧಿಕಾರದ ಪ್ರಮುಖ ನಿಬಂಧನೆಗಳಾದ ಮೊಬೈಲ್ ನಂಬರ್ ಪೋರ್ಟಬಿಲಿಟಿ, ಅನಪೇಕ್ಷಿತ ವಾಣಿಜ್ಯ ಸಂದೇಶಗಳು, ದೂರು ನಿರ್ವಹಣಾ ಪ್ರಕ್ರಿಯೆ ಮುಂತಾದವುಗಳ ಬಗ್ಗೆ ವಿವರಿಸಲಾಯಿತು. ಪ್ರೀಪೇಯ್ಡ್ ಗ್ರಾಹಕರು ಕಳೆದ ಆರು ತಿಂಗಳ ಅವಧಿಯಲ್ಲಿನ ಕರೆ/ಎಸ್.ಎಂ.ಎಸ್ ಗಳ ವಿವರಗಳನ್ನು ತಮ್ಮ ಸೇವಾ ಸಂಸ್ಥೆಯಿಂದ ಪಡೆಯಬಹುದು ಎಂದರು.
ಬಿಲ್ಲಿಂಗ್ ದೂರುಗಳನ್ನು ನಾಲ್ಕು ವಾರಗಳಲ್ಲಿ ಪರಿಹರಿಸಬೇಕು. ಬಳಕೆಯಲ್ಲಿಲ್ಲದ ಯಾವುದೇ ಪ್ರಿಪೇಯ್ಡ್ ಸಂಖ್ಯೆಯನ್ನು 90 ದಿನಗಳ ಮೊದಲು ನಿಷ್ಕ್ರಿಯಗೊಳಿಸುವ ಹಾಗಿಲ್ಲ. ಸೇವೆಯ ನಿಷ್ಕ್ರಿಯ ಬೇಡಿಕೆಯನ್ನು 7 ದಿನದೊಳಗೆ ಪೂರ್ಣಗೊಳಿಸಬೇಕು. ನಂತರದ ಅವಧಿಗೆ ಯಾವುದೇ ಶುಲ್ಕ ವಿಧಿಸುವ ಹಾಗಿಲ್ಲ ಎಂದು ಅವರು ಹೇಳಿದರು. ಹಿರಿಯ ಸಂಶೋಧನಾ ಅಧಿಕಾರಿಗಳಾದ ಲತಾ ಎಚ್.ಸಿ. ಮತ್ತು ಮುರಳೀಧರ ಕೆ. ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.