ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24 ತೀರ್ಥಂಕರರಿಗೆ ಏಕಕಾಲಕ್ಕೆ ಅಭಿಷೇಕ

Last Updated 12 ಜೂನ್ 2012, 5:30 IST
ಅಕ್ಷರ ಗಾತ್ರ

ಮೈಸೂರು: ಅದೊಂದು ಅಚ್ಚುಕಟ್ಟಾದ ವೇದಿಕೆ, ವಿಶೇಷ ಕಾರ್ಯಕ್ರಮ. ವೇದಿಕೆ ಮೇಲೆ ಅತಿಥಿಗಳ ಬದಲು ತೀರ್ಥಂಕರರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. 24 ತೀರ್ಥಂಕರರು, 24 ಬೆಳ್ಳಿ ಕಳಶಗಳು.. ಏಕಕಾಲಕ್ಕೆ ಮಹಾಠ ಅಭಿಷೇಕ.. ಮುಗಿಲು ಮುಟ್ಟಿದ ಭಕ್ತರ ಜೈ ಘೋಷ..

-ಇವು ಶ್ರೀರಾಂಪುರದ `ಮಹಾವೀರ ಭವನ~ದಲ್ಲಿ ಸೋಮವಾರ ಕಂಡು ಬಂದ ದೃಶ್ಯಗಳು.
ದಿಗಂಬರ ಜೈನ ಸಮಾಜ ಹಾಗೂ ಮಹಾವೀರ ಭವನ ನಿರ್ಮಾಣ ಸಮಿತಿ ವತಿಯಿಂದ ಶ್ರೀರಾಂಪುರದಲ್ಲಿ ನಿರ್ಮಿಸಲಾಗಿ ರುವ `ಮಹಾವೀರ ಭವನ~ದ ಉದ್ಘಾಟನಾ ಸಮಾರಂಭದ ಅಂಗವಾಗಿ ಏರ್ಪಡಿಸಿದ್ದ `24 ತೀರ್ಥಂಕರರಿಗೆ ಏಕಕಾಲಕ್ಕೆ ಮಹಾ ಅಭಿಷೇಕ~ ಕಾರ್ಯಕ್ರಮ ಭಕ್ತರ ಗಮನ ಸೆಳೆಯಿತು.

ಶ್ರವಣಬೆಳಗೊಳ ದಿಗಂಬರ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನ ಹಾಗೂ ಕನಕಗಿರಿ ದಿಗಂಬರ ಜೈನ ಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಹೆರ್ತೂರು ಶಾಂತರಾಜುಶಾಸ್ತ್ರಿ ಅವರ ಪುತ್ರ ಹಾಗೂ ಬೆಂಗಳೂರಿನ ಜೈನ ಮಿಲನ್ ಅಸೋಸಿಯೇಷನ್ ಅಧ್ಯಕ್ಷರೂ ಆದ ಎಸ್. ಜಿತೇಂದ್ರಕುಮಾರ್ ಅವರು `ಮಂಗಳ ಕಳಶ~ ಸ್ಥಾಪನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಕ್ತರು ಹಾಗೂ ಜೈನ ಸಮುದಾಯದ ಮುಖಂಡರು `ಓಂ ಮಂಗಲಂ ಓಂಕಾರ ಮಂಗಲಂ..ಅರಿಹಂತ ಮಂಗಲಂ~ ಎಂಬ ಘೋಷವಾಣಿ ಮೊಳಗಿಸಿದರು. ಬಳಿಕ `ಜಿನವಾಣಿ~ಯೊಂದಿಗೆ ಶೃತ ಸ್ಥಾಪನೆ (ಸರಸ್ವತಿದೇವಿ) ನೆರವೇರಿಸಲಾಯಿತು. ನಿರಂತರ ಎರಡು ಗಂಟೆಗಳ ಕಾಲ ನಡೆದ ಅಭಿಷೇಕ ಕಾರ್ಯಕ್ರಮಕ್ಕೆ ನೂರಾರು ಭಕ್ತರು ಸಾಕ್ಷಿಯಾದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತರಾದರು.

ದೀಪ ಪ್ರಜ್ವಲನೆ: 24 ತೀರ್ಥಂಕರರ ಮಹಾ ಅಭಿಷೇಕ ಕಾರ್ಯಕ್ರಮಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಸಹೋದರ ಹಾಗೂ ಭಾರತೀಯ ಜೈನ ಮಿಲನ್‌ನ ರಾಷ್ಟ್ರೀಯ ಕಾರ್ಯಾಧ್ಯಕ್ಷರೂ ಆಗಿರುವ ಡಿ.ಸುರೇಂದ್ರ ಕುಮಾರ್ `ದೀಪ ಪ್ರಜ್ವಲನೆ~ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, `ಜೈನ ಸಂಸ್ಕೃತಿ ಮಹೋತ್ಸವದ ಅಂಗವಾಗಿ 2009ರಲ್ಲಿ ಬೆಂಗಳೂರಿನಲ್ಲಿ ನೆರವೇರಿದ ಭವ್ಯ ಕಲ್ಪಧ್ರುಮ ಆರಾಧನಾ ಮಾದರಿಯಲ್ಲಿ 24 ತೀರ್ಥಂಕರರಿಗೆ ಅಭಿಷೇಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಮಹಾವೀರ ಭವನವನ್ನು ಅದ್ಭುತವಾಗಿ ನಿರ್ಮಿಸುವ ಮೂಲಕ ಜೈನ ಸಮುದಾಯದ ಮುಖಂಡರು ಉತ್ತಮ ಕೆಲಸ ಮಾಡಿದ್ದಾರೆ. ಇಂತಹ ವೈಶಿಷ್ಟ್ಯಪೂರ್ಣ ಕಾರ್ಯ ಕ್ರಮ ಆಯೋಜಿಸುತ್ತಿರುವುದು ಮಹತ್ಕಾರ್ಯ ವಾಗಿದೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಕಾರ್ಯಾಧ್ಯಕ್ಷೆ ಕೇಸರಿ ರತ್ನರಾಜಮ್ಮ, ದಿಗಂಬರ ಜೈನ ಸಮಾಜದ ಅಧ್ಯಕ್ಷ ಎಸ್.ಎನ್.ಪ್ರಕಾಶ್‌ಬಾಬು, ಕಾರ್ಯಾಧ್ಯಕ್ಷ ಎಂ.ಎ.ಸುಧೀರ್‌ಕುಮಾರ್, ಉಪಾಧ್ಯಕ್ಷ ಬಿ.ಎಸ್.ಸಂತೋಷ್‌ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT