ಹುಬ್ಬಳ್ಳಿ: `ಕರ್ನಾಟಕ ಬಾಲವಿಕಾಸ ಅಕಾಡೆಮಿ ವತಿಯಿಂದ ಇದೇ 27ರಿಂದ ಮೂರು ದಿನ ನಗರದ ಸಿದ್ಧಾರೂಢ ಸ್ವಾಮಿ ಮಠದ ಆವರಣದಲ್ಲಿ `ಅಂಗವಿಕಲ ಮಕ್ಕಳ ರಾಜ್ಯ ಮಟ್ಟದ ಸಾಂಸ್ಕೃತಿಕ ಹಬ್ಬ-2012' ಹಮ್ಮಿಕೊಳ್ಳಲಾಗಿದೆ' ಎಂದು ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ ತಿಳಿಸಿದರು.
`ರಾಜ್ಯದ ವಿವಿಧ ಜಿಲ್ಲೆಗಳಿಂದ 1500ಕ್ಕೂ ಹೆಚ್ಚು ಅಂಗವಿಕಲ ಮಕ್ಕಳು ಈ ಹಬ್ಬದಲ್ಲಿ ಭಾಗವಹಿಸಲಿದ್ದಾರೆ. ಅಂಧ, ಕಿವುಡ, ಬುದ್ಧಿಮಾಂದ್ಯ ಮತ್ತು ದೈಹಿಕವಾಗಿ ಅಂಗವಿಕಲ ಮಕ್ಕಳು ಎಂದು ನಾಲ್ಕು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, 6ರಿಂದ 18 ವಯೋಮಾನದ ಮಕ್ಕಳು ಭಾಗವಹಿಸಲಿದ್ದಾರೆ' ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
ಸಮೂಹ ನೃತ್ಯ, ಸಮೂಹ ಗಾಯನ, ಭರತನಾಟ್ಯ, ಛದ್ಮವೇಷ, ಚಿತ್ರರಚನೆ ಮತ್ತು ಏಕಪಾತ್ರಾಭಿನಯ ವಿಭಾಗದಲ್ಲಿ ಸ್ಪರ್ಧೆಗಳನ್ನು ನಡೆಸಲಾಗುವುದು.ಸ್ಪರ್ಧೆಗಳಲ್ಲಿ ಭಾಗವಹಿಸಲು 15 ಜಿಲ್ಲೆಗಳಿಂದ ಮಕ್ಕಳು ನೋಂದಣಿ ಮಾಡಿಕೊಂಡಿದ್ದಾರೆ. ಭಾಗವಹಿಸುವ ಮಕ್ಕಳಿಗೆ ಪ್ರಯಾಣ, ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗುವುದು' ಎಂದರು.