ಮೊಳಕಾಲ್ಮುರು: ನೇಕಾರ ಒಳಪಂಗಡಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸ್ಥಾಪಿತವಾಗಿರುವ ನೇಕಾರ ಒಕ್ಕೂಟದ ರಾಜ್ಯಮಟ್ಟದ ಸಮಾವೇಶ ಅ. 28ರಂದು ತುಮಕೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ನೇಕಾರ ಒಕ್ಕೂಟದ ಅಧ್ಯಕ್ಷ ಕೆ.ಸಿ. ಮಂಜುನಾಥ್ ಹೇಳಿದರು.
ಇಲ್ಲಿನ ಪಾಂಡುರಂಗ ಸ್ವಾಮಿ ದೇವಸ್ಥಾನ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಒಕ್ಕೂಟದ ತಾಲ್ಲೂಕು ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನಾಂಗದವರು ಭಾಗವಹಿಸಲು ಕ್ರಮಗಳನ್ನು ಕೈಗೊಳ್ಳಬೇಕು, ಸಮಾವೇಶದಲ್ಲಿ ನೇಕಾರ ಜನಾಂಗ ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಹೆಚ್ಚು ಜನರು ಭಾಗವಹಿಸಬೇಕಾದ ಅನಿವಾರ್ಯತೆ ಇದ್ದು ಸಹಕಾರ ನೀಡಬೇಕು ಎಂದರು.
ಕಾರ್ಯದರ್ಶಿ ಪಿ. ಶ್ರೀನಿವಾಸುಲು ಮಾತನಾಡಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ನೇಕಾರ ಜನಾಂಗ ಒಳಪಂಗಡ ಹೆಸರಿನಲ್ಲಿ ಒಡೆದು ಹೋಗಿದೆ. ಇದನ್ನು ಮತ್ತೆ ಒಂದಾಗಿಸಲು ನೇಕಾರ ಒಕ್ಕೂಟ ಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಗೌರವಾಧ್ಯಕ್ಷ ಸ್ವಾಮಿದೇವ ಗಾಯಕವಾಡ್ ವಹಿಸಿದ್ದರು.
ಜಿಲ್ಲಾ ಸಂಘದ ಮಲ್ಲಿಕಾರ್ಜುನಪ್ಪ, ಕೆ.ಆರ್. ರಾಧಾಕೃಷ್ಣ, ಮಂಜುಳಾಸ್ವಾಮಿ, ಬಿ.ಟಿ. ನಾಗಭೂಷಣ್, ಸಾಕ್ರೆ ರಾಮಕೃಷ್ಣಪ್ಪ, ಡಿ.ಎಸ್. ಮಂಜುನಾಥ್, ಕೆ.ಟಿ. ಪ್ರಹ್ಲಾದ್, ಡಿ.ಎಚ್. ಮಂಜುನಾಥ್, ಎಚ್.ಇ. ವೇಣುಗೋಪಾಲ್, ಪಾರ್ವತಿ ವಾಂಜ್ರೆ ಉಪಸ್ಥಿತರಿದ್ದರು.