ಚಿಂತಾಮಣಿ: ಬಲಿಜ ಜನಾಂಗವನ್ನು ಕೇವಲ ವಿದ್ಯಾಭ್ಯಾಸಕ್ಕಾಗಿ ಮಾತ್ರ 2ಎ ವರ್ಗಕ್ಕೆ ಸೇರಿಸಲಾಗಿದೆ. ಉಳಿದೆಲ್ಲ ಸವಲತ್ತುಗಳ ದೃಷ್ಟಿಯಿಂದ ಸಂಘವು 3ಎ ಸ್ಥಾನಮಾನ ಹೊಂದಿದೆ. ಬಲಿಜ ಜನಾಂಗಕ್ಕೆ ಸಂಪೂರ್ಣ 2ಎ ಸ್ಥಾನಮಾನ ನೀಡಬೇಕು ಎಂದು ಶನಿವಾರ ನಗರದಲ್ಲಿ ನಡೆದ ಜನಾಂಗದ ಸಭೆಯಲ್ಲಿ ಒತ್ತಾಯಿಸಲಾಯಿತು.
ಮುಖಂಡ ಲಕ್ಷ್ಮೀನಾರಾಯಣರೆಡ್ಡಿ ಮಾತನಾಡಿ, ದೇವರಾಜ ಅರಸ್ ಕಾಲದಲ್ಲಿ ಬಲಿಜ ಜನಾಂಗವನ್ನು 3ಎ ಪ್ರವರ್ಗಕ್ಕೆ ಸೇರಿಸಲಾಯಿತು. ಇದರಿಂದ ಜನಾಂಗದ ಅಭಿವೃದ್ಧಿಗೆ ತೊಂದರೆಯಾಯಿತು. ಅನೇಕ ವರ್ಷಗಳ ಹೋರಾಟದ ನಂತರ ಹಿಂದಿನ ಯಡಿಯೂರಪ್ಪ ಸರ್ಕಾರ ವಿದ್ಯಾಭ್ಯಾಸಕ್ಕಾಗಿ ಬಲಿಜ ಜನಾಂಗವನ್ನು 2ಎ ವರ್ಗಕ್ಕೆ ಸೇರಿಸಿತು. ಶೀಘ್ರ ಜನಾಂಗಕ್ಕೆ ಸಂಪೂರ್ಣ 2ಎ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.
ನಗರದಲ್ಲಿ ನಿವೇಶನ ನೀಡಿದರೆ ಜನಾಂಗದ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಸೌಲಭ್ಯ ಒದಗಿಸಿಕೊಡುವುದಾಗಿ ಸಮಾಜ ಸೇವಕ ಹಾಗೂ ಬಲಿಜ ಜನಾಂಗದ ಮುಖಂಡ ನರೇಶ್ಕುಮಾರ್ ಭರವಸೆ ನೀಡಿದರು.
ಜನಾಂಗದವರು ಯಾವ ಪಕ್ಷದಲ್ಲಾದರೂ ಇರಲಿ, ಸಂಘಟಿತರಾಗಿ ಬಲಿಜ ಜನಾಂಗದ ಹಿತವನ್ನು ಕಾಪಾಡಬೇಕು. ಜನಾಂಗದ ಗಣತಿ ಮಾಡಿ ಸ್ಥಿತಿಗತಿಗಳ ಮಾಹಿತಿಯನ್ನು ಸಂಗ್ರಹಿಸಬೇಕು. ಸಮುದಾಯದಲ್ಲಿ ಯಾರಿಗೆ ಏನು ಅವಶ್ಯಕವೋ ಅದನ್ನು ವೈಯಕ್ತಿಕವಾಗಿ ಹಾಗೂ ಸರ್ಕಾರದಿಂದ ಕಲ್ಪಿಸಿಕೊಡಲು ಜನಾಂಗದ ಮುಖಂಡರೆಲ್ಲರೂ ಶ್ರಮಿಸಬೇಕು ಎಂದರು.
ಬ್ಯಾಟರಾಯನಪುರ ಬಲಿಜ ಸಂಘದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ ದಶಕಗಳ ಹಿಂದೆಯೇ ಎಂಜಿನಿಯರಿಂಗ್,ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿದ ಕೀರ್ತಿ ಎಂ.ಎಸ್.ರಾಮಯ್ಯ ಅವರದ್ದು. ಕಲಾವಿದ ಸುಬ್ಬಯ್ಯನಾಯ್ಡು ಸೇವೆ ಅವಿಸ್ಮರಣೀಯ. ಮುಂದಿನ 2 ತಿಂಗಳ ಒಳಗೆ ನಗರದಲ್ಲಿ ಜನಾಂಗದ ವತಿಯಿಂದ ಬೃಹತ್ ಸಭೆ ಆಯೋಜಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯರ ಅವರನ್ನು ಸಆಹ್ವಾನಿಸಿ ಬೇಡಿಕೆಗಳನ್ನು ಮಂಡಿಸಲಾಗುವುದು ಎಂದು ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ವಿ.ಎಲ್.ಕೃಷ್ಣಸ್ವಾಮಿ, ನಗರಸಭೆ ಮಾಜಿ ಸದಸ್ಯ ಸಿ.ಎನ್.ವೆಂಕಟೇಶ್, ಮುಖಂಡರಾದ ಪಾಲಿಟೆಕ್ನಿಕ್ ವೆಂಕಟೇಶ್, ಟಾಕೀಸ್ ಸೀನಪ್ಪ, ದೇವಳಂ ಶಂಕರ್, ಗಾಜಲ ಸುಬ್ರಹ್ಮಣ್ಯಂ, ಕೆ.ಟಿ.ಪ್ರಕಾಶ್, ಕೈವಾರ ಶ್ರೀನಿವಾಸ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.