ನವದೆಹಲಿ (ಪಿಟಿಐ): 2ಜಿ ತರಂಗಾಂತರ ಪ್ರಕರಣದಲ್ಲಿ ಗೃಹ ಸಚಿವ ಪಿ. ಚಿದಂಬರಂ ಅವರನ್ನು ಸಹ ಆರೋಪಿಯನ್ನಾಗಿ ಮಾಡುವಂತೆ ಕೋರಿದ ಜನತಾ ಪಕ್ಷ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಅವರ ಅರ್ಜಿಯನ್ನು ದೆಹಲಿ ನ್ಯಾಯಾಲಯ ಶನಿವಾರ ವಜಾ ಮಾಡಿತು. ಇದರಿಂದಾಗಿ ಚಿದಂಬಂರಂ ಸಧ್ಯಕ್ಕೆ ನಿರುಮ್ಮಳರಾಗಿದ್ದಾರೆ.
ದೀರ್ಘ ಕಾಲದಿಂದ ನಿರೀಕ್ಷೆಯಲ್ಲಿದ್ದ ತಮ್ಮ ತೀರ್ಪನ್ನು ಓದಿ ಹೇಳಿದ ವಿಶೇಷ ನ್ಯಾಯಾಧೀಶ ಒ.ಪಿ. ಸೈನಿ ಅವರು ~ಚಿದಂಬರಂ ಅವರನ್ನು ಸಹ ಆರೋಪಿಯನ್ನಾಗಿಸಿ ಸಮನ್ಸ್ ಕಳುಹಿಸುವಂತೆ ನೀವು ಮಾಡಿದ ಕೋರಿಕೆಯನ್ನು ವಜಾ ಮಾಡಲಾಗಿದೆ~ ಎಂದು ಹೇಳಿದರು.
ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ವಿರುದ್ಧ ಹೆಚ್ಚಿನ ಆರೋಪಗಳನ್ನು ಮಾಡಿ ಸ್ವಾಮಿ ಅವರು ಸಲ್ಲಿಸಿದ ದೂರಿನ ವಿಚಾರಣೆಯನ್ನು, ಚಿದಂಬರಂ ಅವರನ್ನು ಸಹ ಆರೋಪಿಯನ್ನಾಗಿ ಮಾಡದೆಯೇ ಮಾರ್ಚ್ 17ರಿಂದ ಆರಂಭಿಸಲಾಗುವುದು ಎಂದು ನ್ಯಾಯಾಲಯ ಹೇಳಿತು.
2ಜಿ ತರಂಗಾಂತರ ದರ ನಿಗದಿ ಮಾಡುವಲ್ಲಿ ರಾಜಾ ಅವರಷ್ಟೇ ಚಿದಂಬರಂ ಕೂಡಾ ತಪ್ಪಿತಸ್ಥರಾಗಿರುವುದ ರಿಂದ 2ಜಿ ಪ್ರಕರಣದಲ್ಲಿ ಚಿದಂಬರಂ ಅವರನ್ನೂ ಸಹ ಆರೋಪಿಯನ್ನಾಗಿ ಮಾಡಬೇಕು ಎಂದು ಸ್ವಾಮಿ ತಮ್ಮ ಅರ್ಜಿಯಲ್ಲಿ ಕೋರಿದ್ದರು.