ನವದೆಹಲಿ (ಪಿಟಿಐ): 2ಜಿ ತರಂಗಾಂತರ ಪ್ರಕರಣದ ವಿವಾದಾತ್ಮಕ ಟಿಪ್ಪಣಿಗೆ ಸಂಬಂಧಿಸಿದಂತೆ ಪಿ.ಚಿದಂಬರಂ ಮತ್ತು ಪ್ರಣವ್ ಮುಖರ್ಜಿ ಅವರ ಮಧ್ಯೆ ~ಕಾರ್ಯ ನಿರ್ವಹಣಾ ಭಿನ್ನಾಭಿಪ್ರಾಯ~ ಇದ್ದದ್ದು ಹೌದು ಎಂದು ಭಾನುವಾರ ಇಲ್ಲಿ ಒಪ್ಪಿಕೊಂಡ ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರು, ಆದರೆ ಆಗ ಹಣಕಾಸು ಸಚಿವರಾಗಿದ್ದ ಚಿದಂಬರಂ ಅವರು ಸಂಪುಟ ನಿರ್ಧಾರಕ್ಕೆ ವಿರುದ್ಧವಾಗಿ ಏನೂ ಮಾಡುವಂತಿರಲಿಲ್ಲ ಎಂದು ಪ್ರತಿಪಾದಿಸಿದರು.
ಮೊದಲು ಬಂದವರಿಗೆ ಮೊದಲ ಅವಕಾಶ ನೀತಿಯ ವಿಚಾರದಲ್ಲಿ, ಹರಾಜು ಹಾಕುವುದಕ್ಕೆ ವಿರುದ್ಧವಾಗಿ ಸಂಪುಟ ನಿರ್ಧರಿಸಿದ ಬಳಿಕ ಈ ಕುರಿತು ಒತ್ತಾಯಗಳು ಬಂದಿದ್ದರೂ ಆಗ ಹಣಕಾಸು ಸಚಿವರಾಗಿದ್ದ ಚಿದಂಬರಂ ಅವರು ಸಚಿವ ಸಂಪುಟ ನಿರ್ಧಾರಕ್ಕೆ ವಿರುದ್ಧವಾಗಿ ಏನನ್ನೂ ಮಾಡಲು ಸಾಧ್ಯವಿರಲಿಲ್ಲ ಎಂದು ಅವರು ಹೇಳಿದರು.
ಸಂಪುಟದ ನಿರ್ಧಾರವನ್ನು ಚಿದಂಬರಂ ಒಬ್ಬರೇ ಬದಲಾಯಿಸಲು ಸಾಧ್ಯವಿತ್ತೇ? ಹರಾಜು ಹಾಕುವುದರ ವಿರುದ್ಧ ಸಂಪುಟ ಒಮ್ಮೆ ನಿರ್ಧಾರ ಕೈಗೊಂಡ ಬಳಿಕ ಅವರಿಗೆ ಬೇರೆ ಯಾವ ಮಾರ್ಗವಿತ್ತು? ಎಂದು ಖುರ್ಷಿದ್ ಪ್ರಶ್ನಿಸಿದರು.
ಸಂಪುಟ ಕೈಗೊಂಡ ನಿರ್ಧಾರಕ್ಕೆ ಸಂಬಂಧಿಸಿದಂತೆ ದೊಡ್ಡ ಸಂಖ್ಯೆಯ ಸಚಿವರು ಮತ್ತು ಒಂದಿಬ್ಬರು ಸಚಿವರ ಮಧ್ಯೆ ಭಿನ್ನಾಭಿಪ್ರಾಯಗಳು ಇದ್ದಾಗ ಇತರರು ಹೇಳಿದ್ದಕ್ಕೆ ನೀವು ಒಪ್ಪಿಗೆ ನೀಡಲೇಬೇಕಾಗುತ್ತದೆ ಎಂದು ಅವರು ಹೇಳಿದರು.