ಬೆಂಗಳೂರು: ಭಾರತೀಯ ರಿಯಲ್ ಎಸ್ಟೇಟ್ ನಿರ್ಮಾಣಗಾರರ ಮಹಾಸಂಘ (ಕ್ರೆಡಾಯ್) ಆಯೋಜಿಸಿರುವ ದಕ್ಷಿಣ ಭಾರತದ ಮೊದಲ ರಿಯಲ್ ಎಸ್ಟೇಟ್ ಸಮ್ಮೇಳನ ‘ಸೌತ್ಕಾನ್-2011’ ಫೆಬ್ರುವರಿ 4 ಮತ್ತು 5ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ನಿರ್ಮಾಣಗಾರ ಸಮಸ್ಯೆ, ವಿಶೇಷವಾಗಿ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ಉದ್ಯಮದ ಸದ್ಯದ ಸ್ಥಿತಿಗತಿ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಗುವುದು ಎಂದು ಶನಿವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ‘ಕ್ರೆಡಾಯ್’ ಕರ್ನಾಟಕ ಅಧ್ಯಕ್ಷ ಸುಶೀಲ್ ಮಂತ್ರಿ ತಿಳಿಸಿದರು.
ಕೌಶಲ್ಯ ಹೊಂದಿದ ವೃತ್ತಿಪರರ ಕೊರತೆಯನ್ನು ರಿಯಲ್ ಎಸ್ಟೇಟ್ ಉದ್ಯಮ ಮುಖ್ಯವಾಗಿ ಎದುರಿಸುತ್ತಿದೆ. ಅಲ್ಲದೆ, ದೇಶಾದ್ಯಂತ ಬಲವಾದ ಸಿಮೆಂಟ್ ಲಾಭಿ ಇದ್ದು, ಸಿಮೆಂಟ್ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.