ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಇದೇ 8ರಿಂದ 13ರವರೆಗೆ ನಡೆಯಲಿದೆ. 11ರಂದು ಸಂಜೆ 5ರಿಂದ 80ನೇ ವರ್ಷದ ಸರ್ವಧರ್ಮ ಸಮ್ಮೇಳನ ಮತ್ತು 12ರಂದು ಸಂಜೆ 5ರಿಂದ ಸಾಹಿತ್ಯ ಸಮ್ಮೇಳನ ನಡೆಯಲಿದೆ.
8ರಂದು ಸಂಜೆ 5ಕ್ಕೆ ಮಂಜುನಾಥೇಶ್ವರ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ವಸ್ತುಪ್ರದರ್ಶನ ಉದ್ಘಾಟನೆಗೊಳ್ಳಲಿದೆ. 10ರಂದು ಮಧ್ಯಾಹ್ನ 2ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಲಲಿತಕಲಾ ಗೋಷ್ಠಿ ನಡೆಯಲಿದೆ. 11ರಂದು ಸಂಜೆ 5ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಚೆನ್ನೈಯ ರಾಮಾನುಜಂ ಮಿಶನ್ ಟ್ರಸ್ಟ್ನ ಪ್ರಸನ್ನ ವೆಂಕಟಾಚಾರ್ಯ ಚತುರ್ವೇದಿ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಸಮ್ಮೇಳನ ಉದ್ಘಾಟಿಸುವರು. 12ರಂದು ಸಂಜೆ 5ರಿಂದ ಇದೇ ವೇದಿಕೆಯಲ್ಲಿ ಹಿರಿಯ ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಕ್ಷದೀಪೋತ್ಸವದ ಪ್ರಯುಕ್ತ ಪ್ರತಿದಿನ ರಾತ್ರಿ 9ರಿಂದ ಉತ್ಸವಗಳು ನಡೆಯಲಿವೆ. 8ರಂದು ಹೊಸಕಟ್ಟೆ ಉತ್ಸವ, 9ರಂದು ಕೆರೆಕಟ್ಟೆ ಉತ್ಸವ, 10ರಂದು ಲಲಿತೋದ್ಯಾನ ಉತ್ಸವ, 11ರಂದು ಕಂಚಿಮಾರು ಕಟ್ಟೆ ಉತ್ಸವ ಹಾಗೂ 12ರಂದು ಗೌರಿಮಾರು ಕಟ್ಟೆ ಉತ್ಸವ ನಡೆಯಲಿದೆ. 13ರಂದು ಸಂಜೆ 6.30ರಿಂದ ಮಹೋತ್ಸವ ಸಭಾಭವನದಲ್ಲಿ ಭಗವಾನ್ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಲಿದೆ. ವಸ್ತುಪ್ರದರ್ಶನ ಮಂಟಪದಲ್ಲಿ ಐದೂ ದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಮೃತವರ್ಷಿಣಿ ಮಂಟಪದಲ್ಲಿ 10ರಂದು ಮಧ್ಯಾಹ್ನದ ನಂತರ ಹಾಗೂ 11 ಮತ್ತು 12ರಂದು ರಾತ್ರಿ 8.30ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ಹೇಳಿದ್ದಾರೆ.