ಶ್ರೀರಂಗಪಟ್ಟಣ: ಮಡಿವಾಳ ಜನಾಂಗವನ್ನು ಪರಿಶಿಷ್ಟ (ಎಸ್ಟಿ) ಪಂಗಡಕ್ಕೆ ಸೇರಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಡಿವಾಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಮಟ್ಟದ ಸಭೆ ಅ.29ರಂದು ನಡೆಯಲಿದ್ದು, ಜಿಲ್ಲೆಯ ಮಡಿವಾಳ ಜನರಿಂದ ಅಂದು ~ಬೆಂಗಳೂರು ಚಲೋ~ ನಡೆಯಲಿದೆ ಎಂದು ಸಂಘದ ಗೌರವಾಧ್ಯಕ್ಷ ಗೋವಿಂದಪ್ಪ ತಿಳಿಸಿದರು.
ಪಟ್ಟಣದ ಯುವಜನ ಕೇಂದ್ರದಲ್ಲಿ ಬುಧವಾರ ನಡೆದ ತಾಲ್ಲೂಕು ಮಡಿವಾಳ ಮಾಚಿದೇವರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಿಂದ ಸಾವಿರಕ್ಕೂ ಹೆಚ್ಚು ಜನರು ಬೆಂಗಳೂರು ಸಭೆಗೆ ತೆರಳಲಿದ್ದೇವೆ. ಮಡಿವಾಳ ಜನರನ್ನು ಕೇರಳ, ತಮಿಳುನಾಡು ಸೇರಿದಂತೆ ಇತರ 16 ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ. ಅದೇ ರೀತಿ ಕರ್ನಾಟಕದಲ್ಲಿ ಎಸ್ಟಿ ವರ್ಗಕ್ಕೆ ಸೇರಿಸುವುದೂ ಸೇರಿದಂತೆ ಹಲವು ಬೇಡಿಕೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದರು.
ಮಡಿವಾಳರ ಪ್ರಗತಿಗೆ ಪೂರಕ ಯೋಜನೆಗಳನ್ನು ರೂಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ `ಎನ್ಪಿಎಸ್ ಯೋಜನೆ~ ಜಾರಿಗೆ ತಂದಿವೆ. 18 ವರ್ಷದಿಂದ 60 ವರ್ಷ ವಯಸ್ಸಿನವರು ಮಾಸಿಕ ರೂ.100 ಪಾವತಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ ರೂ.100 ಭರಿಸಲಿವೆ. 20 ವರ್ಷದ ನಂತರ ಜೀವತಾವಧಿ ವರೆಗೆ ಮಾಸಿಕ ರೂ.3000 ಪಿಂಚಣಿ ಸಿಗಲಿದೆ ಎಂದರು.
ಗ್ರಾ.ಪಂ. ಸದಸ್ಯರಾದ ಸಿ.ಪ್ರಸನ್ನ, ಕಾಳಪ್ಪ, ಮರಳಾಗಾಲ ಮಂಜುನಾಥ್, ಕೃಷ್ಣಪ್ಪ, ಪೈ.ನರಸಿಂಹ, ರಮೇಶ್, ವೆಂಕಟಪ್ಪ, ಗೋವಿಂದಪ್ಪ, ಪುಟ್ಟರಾಜು ಇತರರು ಇದ್ದರು.