ವಿದ್ಯಾರ್ಥಿಗಳ ಕೊರತೆಯ ನೆಪದಲ್ಲಿ ಸರ್ಕಾರಿ ಶಾಲೆ ವಿಲೀನ ಪ್ರಕ್ರಿಯೆಗೆ ನಮ್ಮ ಅಂಗನವಾಡಿಗಳೂ ಕಾರಣ.
ಮೂಲಭೂತ ಸೌಕರ್ಯಗಳಿಲ್ಲದ ಕಟ್ಟಡಗಳು, ಕಲಿಕಾ ಪರಿಸರದ ಕೊರತೆ ಮತ್ತು ಸಾಂಪ್ರದಾಯಿಕ ಬೋಧನಾ ವಿಧಾನಗಳಿಂದ ನಮ್ಮ ಪೂರ್ವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಕಳೆಗುಂದಿದೆ.
ರಾಜ್ಯ ಸರ್ಕಾರ `ಗುಣಾತ್ಮಕ ಶಿಕ್ಷಣಕ್ಕೆ ಕ್ರಿಯಾಶೀಲ ಆಡಳಿತ~ ಎಂಬ ತತ್ವದಡಿ ಕಿರಿಯ, ಹಿರಿಯ ಪ್ರಾಥಮಿಕ, ಮತ್ತು ಪ್ರೌಢಶಾಲೆಗಳಲ್ಲಿ ವಿಶೇಷ ಬದಲಾವಣೆ ಮಾಡುತ್ತಿದೆ.
ಆದರೆ ಗ್ರಾಮೀಣ ಮಕ್ಕಳ ಶಿಕ್ಷಣದ ಆರಂಭಿಕ ಹಂತವಾದ ಅಂಗನವಾಡಿಗಳನ್ನು ಸಂಪೂರ್ಣ ನಿರ್ಲಕ್ಷ್ಯಿಸಿದೆ. ಇದು ಸರಿಯಾಗಿ ಅಡಿಪಾಯ ಹಾಕದೆ ಬೃಹತ್ ಕಟ್ಟಡ ಕಟ್ಟಲು ಹೊರಟಂತಿದೆ.
ಸರ್ಕಾರ ಈ ಹಂತದ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಕೆಲಸಕ್ಕೆ ಮುಂದಾಗಲಿ. ಸೌಲಭ್ಯಗಳಿರುವ ಕಟ್ಟಡ, ಮಕ್ಕಳ ಮನೋವಿಕಾಸಕ್ಕೆ ಬೇಕಾಗುವ ಸಾಮಗ್ರಿಗಳು, ಉತ್ತಮ ವಿದ್ಯಾರ್ಹತೆ, ತರಬೇತಿ ಪಡೆದ ಶಿಕ್ಷಕಿಯರ ನೇಮಕ, ಅವರಿಗೆ ಆಕರ್ಷಕ ವೇತನ ನೀಡುವ ಕಡೆಗೆ ಗಮನ ಕೊಡಬೇಕು.
ಅಂಗನವಾಡಿ ಎಂಬ ಹೆಸರಿಗೆ ಬದಲು `ಸರ್ಕಾರಿ ಮಾದರಿ ನರ್ಸರಿ ಶಾಲೆ~ ಎಂದು ಮರುನಾಮಕರಣ ಮಾಡಬೇಕು.
ಈ ಬದಲಾವಣೆಗಳನ್ನು ಮಾಡಿದರೆ ಪೂರ್ವ ಪ್ರಾಥಮಿಕ ಹಂತದ ಸರ್ಕಾರಿ ಶಿಕ್ಷಣ ವ್ಯವಸ್ಥೆ ಬಲಗೊಳ್ಳುತ್ತದೆ. ಪಾಲಕರು ಖಾಸಗಿ ಶಾಲೆಗಳನ್ನು ಹುಡುಕಿಕೊಂಡು ಹೋಗುವ ಬದಲು ಗುಣಾತ್ಮಕ ಸರ್ಕಾರಿ ನರ್ಸರಿ ಶಾಲೆಗಳತ್ತ ಮುಖ ಮಾಡುತ್ತಾರೆ.
ಈಗ ಪಾಲಕರು ಖಾಸಗಿ ನರ್ಸರಿ ಶಾಲೆಗಳ ಆಡಂಬರಕ್ಕೆ ಮಾರುಹೋಗಿ ತಮ್ಮ ಮಕ್ಕಳನ್ನು ಆ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ.
ಒಮ್ಮೆ ಈ ಶಾಲೆಗೆ ಸೇರಿದ ಮಗುವನ್ನು 7ನೆಯ ತರಗತಿ ಮುಗಿಯುವವರೆಗೆ ಬೇರೆ ಕಡೆ ದಾಖಲಾಗಲು ಆ ಶಾಲೆಗಳು ಅವಕಾಶ ಕೊಡುವುದಿಲ್ಲ.
ಮೊದಲ ಹಂತದಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಆಕರ್ಷಿಸಿದರೆ ಶಿಕ್ಷಣ ಗುಣಮಟ್ಟ ಸುಧಾರಿಸುತ್ತದೆ. ಶಾಲೆಗಳನ್ನು ಮುಚ್ಚುವ ಸಮಸ್ಯೆ ಬರುವುದಿಲ್ಲ.