ಅಂಕೋಲಾ ನಿವಾಸಿ ಬಾಬಣ್ಣ ತಮ್ಮ ಮನೆಯ ಮುಂದಿನ ಅಂಗಳದ ಪುಟ್ಟ ಕೈತೋಟದಲ್ಲಿ ತರಕಾರಿ, ಹಣ್ಣು ಬೆಳೆಯುತ್ತಿದ್ದಾರೆ. ಹೀರೇಕಾಯಿ, ಬೆಂಡೆಕಾಯಿ, ಹಾಗಲಕಾಯಿ, ಟೊಮೆಟೊ, ಬದನೆಕಾಯಿ, ಅನಾನಸ್, ಪೇರಲ, ಮಾವು, ಬಾಳೆ, ಅರಿಷಿಣ, ಮೆಣಸು, ಪಪ್ಪಾಯಿ ಇನ್ನೂ ಹಲವು ಹಣ್ಣು ತರಕಾರಿಗಳನ್ನು ಬೆಳೆಯುತ್ತಾರೆ.
ಕೈ ತೋಟಕ್ಕೆ ಅವರ ಅಂಗಳದ ತೋಟ ಮಾದರಿ. ಮನೆ ಅಂಗಳದ ಕೈತೋಟದಲ್ಲಿ ಹಣ್ಣು, ತರಕಾರಿ ಬೆಳೆಯುವ ಕನಸನ್ನು ಅವರು ಮನೆ ಕಟ್ಟು ಸಮಯದಲ್ಲೇ ಕಂಡಿದ್ದರು. ಅದಕ್ಕಾಗಿ ಮನೆಯ ಮುಂದೆ ಸಾಕಷ್ಟು ಜಾಗ ಇರುವಂತೆ ನೋಡಿಕೊಂಡಿದ್ದರು. ರೈತ ಕುಟುಂಬದ ಬಾಬಣ್ಣ ಅವರಿಗೆ ಕೈತೋಟ ಬೆಳೆಸುವುದು ಕಷ್ಟ ಎನಿಸಲಿಲ್ಲ.
ಮಳೆಯ ನೀರು ಅಂಗಳದ ಭೂಮಿಯಲ್ಲೇ ಹೆಚ್ಚು ಕಾಲ ಉಳಿಯವ ವ್ಯವಸ್ಥೆ ಮಾಡಿದ್ದಾರೆ. ಬೇಸಿಗೆಯಲ್ಲಿ ಬಾವಿಯ ನೀರನ್ನು ಬಳಸಿಕೊಂಡು ತರಕಾರಿ ಬೆಳೆಯುತ್ತಾರೆ. ಮಳೆ ನೀರು ಸಂಗ್ರಹಕ್ಕೆ ಅಲ್ಲಲ್ಲಿ ಒಂದಡಿ ಉದ್ದಗಲದ ಗುಂಡಿಗಳಿವೆ. ಸ್ನಾನ ಮಾಡಿದ, ಬಟ್ಟೆ ತೊಳೆದ ನೀರನ್ನೂ ವ್ಯರ್ಥವಾಗಿ ಹರಿಯಲು ಬಿಡದೆ ತರಕಾರಿ ಗಿಡಗಳಿಗೆ ಹರಿಸುತ್ತಾರೆ.
ಬೇಸಿಗೆಯಲ್ಲಿ ಗಿಡಗಳ ಮೇಲೆ ಹೆಚ್ಚು ಬಿಸಿಲು ಬೀಳದಂತೆ ನೆರಳಿನ ವ್ಯವಸ್ಥೆ ಮಾಡಿದ್ದಾರೆ. ಗಿಡಗಳಿಗೆ ಕಡಿಮೆ ನೀರು ಹನಿಸುತ್ತಾರೆ.
ಕಡುಬೇಸಿಗೆಯಲ್ಲಿ ಮಣ್ಣಿಗೆ ಹೆಚ್ಚು ಬಿಸಿಲು ಬೀಳುವಂತೆ ನೋಡಿಕೊಳ್ಳುತ್ತಾರೆ. ಮಳೆಗಾಲ ಮುಗಿಯು ಹೊತ್ತಿಗೆ ತರಕಾರಿ ಬೀಜಗಳ ಬಿತ್ತನೆ ಮಾಡುತ್ತಾರೆ. ಸೆಪ್ಟಂಬರ್ನಿಂದ ಮಾರ್ಚ್ ಕೊನೆವರೆಗೆ ಅಂಗಳದಲ್ಲೇ ಹಲವಾರು ತರಕಾರಿ ಬೆಳೆದುಕೊಳ್ಳುತ್ತಾರೆ.
ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕ ಬಳಸದೇ ಗುಣಮಟ್ಟದ ತರಕಾರಿಗಳನ್ನು ಅಂಗಳದಲ್ಲೇ ಬೆಳೆದು ಅವನ್ನೇ ಬಳಸುತ್ತಾರೆ. ಕೈತೋಟದಲ್ಲಿ ಬೆಳೆದ ತರಕಾರಿಗಳನ್ನು ತಿನ್ನುವುದರಿಂದ ಅವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆ ಅವರದು.