ಆನೇಕಲ್: ತಾಲ್ಲೂಕಿನ ಜಿಗಣಿ, ಸರ್ಜಾಪುರ, ಆನೇಕಲ್ ಅಂಚೆ ಕಚೇರಿಗಳನ್ನು ಚನ್ನಪಟ್ಟಣ ಗ್ರಾಮಾಂತರ ವಿಭಾಗದಿಂದ ಬೆಂಗಳೂರು ದಕ್ಷಿಣ ವಿಭಾಗಕ್ಕೆ ಸೇರಿಸಲು ಒತ್ತಾಯಿಸಿ ಕರ್ನಾಟಕ ಜನಾಂದೋಲನ ಸಂಘಟನೆಯ ಕಾರ್ಯಕರ್ತರು ಪಟ್ಟಣದ ಅಂಚೆ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಬನ್ನೇರುಘಟ್ಟ, ಜಿಗಣಿ, ಬೊಮ್ಮಸಂದ್ರ, ಎಲೆಕ್ಟ್ರಾನಿಕ್ ಸಿಟಿ ಅಂಚೆ ಕಚೇರಿಗಳು ಬೆಂಗಳೂರು ದಕ್ಷಿಣ ವಿಭಾಗಕ್ಕೆ ಸೇರ್ಪಡೆಯಾಗಿವೆ. ಆದರೆ ಆನೇಕಲ್, ಅತ್ತಿಬೆಲೆ, ಸರ್ಜಾಪುರ ಅಂಚೆ ಕಚೇರಿಗಳನ್ನು ಮಾತ್ರ ಚನ್ನಪಟ್ಟಣ ಗ್ರಾಮಾಂತರ ವಿಭಾಗಕ್ಕೆ ಸೇರಿಸಲಾಗಿದೆ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿವೆ. ಮರಣ ದಾವೆ, ಚೆಕ್ಗಳ ವಿತರಣೆ, ಬಟವಾಡೆ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಬೆಂಗಳೂರು ಕಚೇರಿ ಸಮೀಪದಲ್ಲಿದ್ದರೂ ದೂರದ ಚನ್ನಪಟ್ಟಣದೊಂದಿಗೆ ವ್ಯವಹರಿಸಲು ತಡವಾಗುತ್ತದೆ.
ಹಾಗಾಗಿ ಶೀಘ್ರ ಸೌಲಭ್ಯ ಕಲ್ಪಿಸುವ ಸಲುವಾಗಿ ಬೆಂಗಳೂರು ದಕ್ಷಿಣ ವಿಭಾಗಕ್ಕೆ ಸೇರಿಸಬೇಕೆಂದು ಒತ್ತಾಯಿಸಿದರು. ನಂತರ ತಾಲ್ಲೂಕು ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಅವರಿಗೆ ಮನವಿ ಸಲ್ಲಿಸಿದರು.