ಕೊಚ್ಚಿ (ಪಿಟಿಐ): ವಿವಾದಿತ ಅಂತರಿಕ್ಷ್-ದೇವಾಸ್ ಒಪ್ಪಂದ ಹಗರಣದಲ್ಲಿ ಸಿಲುಕಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್, ತಮ್ಮ ಕಾನೂನು ಹೋರಾಟವನ್ನು ಮುಂದುವರೆಸಿದ್ದು ಸೋಮವಾರ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಹಗರಣಕ್ಕೆ ಸಂಬಂಧಿಸಿದಂತೆ ಯಾವುದೇ ಸರ್ಕಾರಿ ಹುದ್ದೆಗಳನ್ನು ನೀಡದಂತೆ ಕೇಂದ್ರವು ತಮ್ಮ ವಿರುದ್ಧ ವಿಧಿಸಿದ್ದ ನಿರ್ಬಂಧದ ವಿರುದ್ಧ ಕಳೆದ ವರ್ಷ ನಾಯರ್ ಕೇಂದ್ರೀಯ ಆಡಳಿತ ನ್ಯಾಯಮಂಡಳಿಯ (ಸಿಎಟಿ) ಮೊರೆ ಹೋಗಿದ್ದರು.
ಆದರೆ, ತಮ್ಮ ಮೇಲಿನ ಆರೋಪವನ್ನು ಸಮರ್ಥಿಸಿಕೊಳ್ಳಲು ನಾಯರ್ ವಿಫಲರಾಗಿದ್ದಾರೆ ಎಂಬ ಕಾರಣ ನೀಡಿ ಕಳೆದ ತಿಂಗಳು ಸಿಎಟಿ ಅವರ ಅರ್ಜಿಯನ್ನು ತಳ್ಳಿ ಹಾಕಿತ್ತು.
ಸಿಎಟಿಯ ಈ ಆದೇಶ ಕಾನೂನುಬಾಹಿರ ಎಂದು ಆರೋಪಿಸಿ ಅವರು ಇದೀಗ ಹೈಕೋರ್ಟ್ ಮೊರೆ ಹೋಗಿದ್ದಾರೆ.