ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಖಾಸಗಿ ರೆಸಾರ್ಟ್ ಕಡಿವಾಣಕ್ಕೆ ಕ್ರಮ

Last Updated 14 ಮೇ 2012, 19:30 IST
ಅಕ್ಷರ ಗಾತ್ರ

ದಾಂಡೇಲಿ: ಎಸಿಎಫ್ ಮದನ ನಾಯಕ ಹತ್ಯೆ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಹಳಿಯಾಳ ತಾಲ್ಲೂಕು ಆಡಳಿತಯಂತ್ರವು, ತನ್ನ ವ್ಯಾಪ್ತಿಯಲ್ಲಿನ ಖಾಸಗಿ ರೆಸಾರ್ಟ್‌ಗಳು ಹಾಗೂ ಹೋಮ್‌ಸ್ಟೇಗಳ ಪರಿಶೀಲನೆಗೆ ಮುಂದಾಗಿದೆ.

`ಎಸಿಎಫ್ ಹತ್ಯೆ ನಂತರ ಈ ಕುರಿತು ಹೆಚ್ಚು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ನಮ್ಮ  ವ್ಯಾಪ್ತಿಯ ಎಲ್ಲ    ರೆಸಾರ್ಟ್ ಹಾಗೂ ಹೋಮ್‌ಸ್ಟೇಗಳ ಪರವಾನಗಿ ಪರಿಶೀಲಿಸಲು ಅಧಿಕಾರಿ   ಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಒಂದು ವೇಳೆ ಅಕ್ರಮ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು~ ಎಂದು ಹಳಿಯಾಳ ತಹಶೀಲ್ದಾರ್ ಅಜೀಜ್ ದೇಸಾಯಿ ಭಾನುವಾರ      `ಪ್ರಜಾವಾಣಿ~ಗೆ ತಿಳಿಸಿದರು.

ಭಾರಿ ಉದ್ಯಮ: ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿರುವ ದಾಂಡೇಲಿ, ಹಳಿಯಾಳ ಹಾಗೂ ಜೋಯಿಡಾ ಸಮೀಪ ಸಾಕಷ್ಟು ಸಂಖ್ಯೆಯಲ್ಲಿ  ರೆಸಾರ್ಟ್ ಹಾಗೂ ಹೋಮ್‌ಸ್ಟೇಗಳು ಅಸ್ತಿತ್ವಕ್ಕೆ ಬರುತ್ತಿವೆ.
ಆದರೆ, ಇವುಗಳಲ್ಲಿ ಎಷ್ಟು ಪರವಾನಗಿ ಪಡೆದು ಕಾರ್ಯ ನಿರ್ವಹಿಸುತ್ತಿವೆ ಎಂಬ ಸ್ಪಷ್ಟ ಮಾಹಿತಿ ಇಲ್ಲ.

ದಾಂಡೇಲಿ ಸಮೀಪ ಕಾಳಿ ನದಿ ದಂಡೆಯಲ್ಲಿರುವ ಜಂಗಲ್ ರೆಸಾರ್ಟ್ ಹಾಗೂ ಕುಳಗಿಯಲ್ಲಿನ ನೇಚರ್ ಕ್ಯಾಂಪ್, ಅರಣ್ಯ ಇಲಾಖೆಯೇ ನಿರ್ವಹಿಸುತ್ತಿದೆ. ಈ ಪೈಕಿ ನೇಚರ್ ಕ್ಯಾಂಪ್‌ನಲ್ಲಿ ಮದ್ಯಪಾನ ಮೊದಲಾದ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. 

ಜಂಗಲ್ ರೆಸಾರ್ಟ್‌ನಲ್ಲಿ ಕೊಂಚ ಮಟ್ಟಿಗೆ ಮೋಜು-ಮಸ್ತಿಗೆ ಅವಕಾಶವಿದ್ದರೂ, ಕಾವಲು ಇದ್ದೇ ಇರುತ್ತದೆ. ಇದು ಕೊಂಚ ದುಬಾರಿ ಕೂಡ.

ಹೀಗಾಗಿ ರಜೆಯ ಮೋಜು ಅನುಭವಿಸುವ ಬರುವ ಪ್ರವಾಸಿಗರು   ಖಾಸಗಿ ಆತಿಥ್ಯದ ಮೊರೆ ಹೋಗುತ್ತಾರೆ. ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ಕೃಷಿಯೇತರ ಜಮೀನುಗಳಲ್ಲಿ ರೆಸಾರ್ಟ್, ಹೋಮ್‌ಸ್ಟೇಗಳ ಸ್ಥಾಪನೆಯಾಗುತ್ತಿದ್ದು, ಇಲ್ಲಿ ಊಟೋಪಚಾರದ ಜೊತೆಗೆ ಟ್ರಕ್ಕಿಂಗ್, ಫೈರ್‌ಕ್ಯಾಂಪ್ ಮೊದಲಾದ ಸೇವೆಗಳು ಲಭ್ಯವಿದೆ. ದಾಂಡೇಲಿ ಪಟ್ಟಣದೊಳಗೆ ಎರಡು ಪುಟ್ಟ ಕೊಠಡಿಗಳಲ್ಲೇ  ಕಾರ್ಯನಿರ್ವಹಿಸುವ `ಹೋಮ್‌ಸ್ಟೇ~ಗಳೂ ಸಾಕಷ್ಟಿವೆ.

ಆದರೆ, ಇಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಯಾವೊಂದು ಇಲಾಖೆ ನಿಗಾ ವಹಿಸುತ್ತಿಲ್ಲ ಎಂದು ದೂರುಗಳಿವೆ. ಕೆಲವು ಅಧಿಕಾರಿಗಳೇ ಇದನ್ನು ಒಪ್ಪಿಕೊಳ್ಳುತ್ತಾರೆ.

ಹೋಮ್‌ಸ್ಟೇಗಳಿಗೆ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆಗಳು ಅನುಮತಿ ನೀಡುತ್ತವೆ. ಕೃಷಿಯೇತರ ಭೂಮಿ ಪ್ರಮಾಣಪತ್ರ, ತಾಲ್ಲೂಕು ಆಡಳಿತದಿಂದ ಆಹಾರ ಪದಾರ್ಥಗಳ ಮಾರಾಟಕ್ಕೆ ಅನುಮತಿ ಹಾಗೂ ಮದ್ಯ ಸರಬರಾಜಿಗೆ ಅಬಕಾರಿ ಇಲಾಖೆಯಿಂದ ಅನುಮತಿ ಪಡೆಯಬೇಕಾಗುತ್ತದೆ.

ಹೀಗೆ ಅನುಮತಿ ಪಡೆದ ನಂತರ ಅಲ್ಲಿನ ಚಟುವಟಿಕೆಗಳ ಬಗ್ಗೆ ಯಾವ ಇಲಾಖೆಯೂ ನಿಗಾ ವಹಿಸುವುದಿಲ್ಲ. `ಕಾಡಿನ ಪಕ್ಕದಲ್ಲೇ, ಕಾಡೊಳಗೆ ಇದ್ದರೂ ಅರಣ್ಯ ಇಲಾಖೆಗೂ ಇವುಗಳಿಗೂ ಸಂಬಂಧವಿಲ್ಲ. 

 ಅರಣ್ಯ ಅಥವಾ ವನ್ಯಜೀವಿಗಳಿಗೆ ತೊಂದರೆಯಾದಾಗಲಷ್ಟೇ ನಾವು ಕ್ರಮ ಕೈಗೊಳ್ಳಬಹುದು~ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು. ಕಳೆದ ಭಾನುವಾರ ಸಂಜೆ ಎಸಿಎಫ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಆಗಿದ್ದು ಇದೇ.  ಮದನ ನಾಯಕ ಅವರು ವನ್ಯಜೀವಿ ಸಂರಕ್ಷಣೆಗೆ ಮುಂದಾದ ಕಾರಣ ಪ್ರಾಣ ಕಳೆದುಕೊಳ್ಳಬೇಕಾಯಿತು. 

`ಖಾಸಗಿ ರೆಸಾರ್ಟ್ ಹಾಗೂ ಹೋಮ್‌ಸ್ಟೇಗಳಲ್ಲಿ ಕಾನೂನು ಮೀರಿ ಚಟುವಟಿಕೆಗಳು ನಡೆಯುತ್ತಿರುವ ಕುರಿತು ನಮಗೆ ಮಾಹಿತಿ ಇಲ್ಲ. ಈ ಕುರಿತು ದೂರು ಬಂದರೆ ಕ್ರಮ ಕೈಗೊಳ್ಳುತ್ತೇವೆ. ಈ ಕುರಿತು ಸದ್ಯಕ್ಕೆ ಠಾಣೆ ಮಟ್ಟದಲ್ಲಿ ಸಭೆ ನಡೆಸಿದ್ದು, ಎಚ್ಚರ ವಹಿಸುತ್ತಿದ್ದೇವೆ~ ಎನ್ನುತ್ತಾರೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಭಾಷ ಅಡಿಮನಿ.

ಸೂಕ್ತ ಕ್ರಮ: `ಎಸಿಎಫ್ ಮದನ ನಾಯಕ ಹತ್ಯೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ರೆಸಾರ್ಟ್ ಹಾಗೂ ಹೋಮ್‌ಸ್ಟೇಗಳ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಲಾಗುವುದು. ಅವುಗಳ ಪರವಾನಗಿ ಸಹ ಪರಿಶೀಲಿಸಲಾಗುವುದು. ಕಾನೂನು ಬಾಹಿರ ಚಟುವಟಿಕೆಗಳಿಗೆ ಇಲಾಖೆ ಆಸ್ಪದ ನೀಡುವುದಿಲ್ಲ~ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ. ಬಾಲಕೃಷ್ಣ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT