ಮುಜಾಫರ್ನಗರ (ಪಿಟಿಐ): ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೋಮು ಗಲಭೆ ಪೀಡಿತ ಕವಾಲ್ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದ್ದ ವೇಳೆ ಗ್ರಾಮಸ್ಥರು ಕಪ್ಪು ಬಾವುಟ ಪ್ರದರ್ಶಿಸಿ, ಘೋಷಣೆಗಳನ್ನು ಕೂಗಿದ ಘಟನೆ ನಡೆಯಿತು.
ವಿರೋಧ ಪಕ್ಷಗಳು, ಅಲ್ಪಸಂಖ್ಯಾತ ಮುಖಂಡರ ಟೀಕೆಗಳ ಸುರಿಮಳೆ ನಂತರ ಇದೇ ಮೊದಲ ಸಲ ಯಾದವ್ ಗಲಭೆ ಪೀಡಿತ ಗ್ರಾಮಕ್ಕೆ ಭೇಟಿ ನೀಡಿದ್ದರು.
ಹುಡುಗಿಯೊಬ್ಬಳನ್ನು ಚುಡಾಯಿಸಿದ ಘಟನೆಗೆ ಸಂಬಂಧಿಸಿದಂತೆ ಆ. 27 ರಂದು ಮೂವರು ವ್ಯಕ್ತಿಗಳು ಮೃತಪಟ್ಟು ಜಿಲ್ಲೆಯಾದ್ಯಂತ ಬಿಗುವಿನ ವಾತಾವರಣ ನಿಮಾರ್ಣವಾಗಿತ್ತು.
ಮುಖ್ಯಮಂತ್ರಿ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದ ಗ್ರಾಮಸ್ಥರು ಗಲಭೆಯ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ; ಅಲ್ಲದೆ ಗ್ರಾಮಸ್ಥರಿಂದ ಮನವಿಯನ್ನೂ ಸ್ವೀಕರಿಸಲಿಲ್ಲ ಎಂದು ದೂರಿದರು.
‘ಗಲಭೆಗೆ ಕಾರಣರಾದವರ ವಿರುದ್ಧ ಸರ್ಕಾರ ಕಠಿಣವಾದ ಕ್ರಮ ಕೈಗೊಳ್ಳಲಿದೆ. ರಾಷ್ಟ್ರೀಯ ಭದ್ರತಾ ಪಡೆಯೂ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಿದೆ’ ಎಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸುದ್ದಿಗಾರರಿಗೆ ತಿಳಿಸಿದರು. ಘಟನೆ ದುರದೃಷ್ಟಕರ. ಗಲಭೆ ಹೊತ್ತಿಕೊಳ್ಳಲು ಕೆಲವು ರಾಜಕೀಯ ಪಕ್ಷಗಳು ಕಾರಣವಾಗಿವೆ ಎಂದರು.