ವಿಜಾಪುರ: `ನನ್ನ ತಾಯಿ ಶಾಲೆಗೆ ಹೋಗು ಎಂದು ಸಿಟ್ಟುಮಾಡಿ ಹೊಡೆದಿದ್ದಕ್ಕೆ ನಾನು ಈ ರೀತಿ ಮಾಡಿಕೊಂಡೆ' ಎಂದು 10 ವರ್ಷದ ಬಾಲಕ ಅಜಯ್ ಜಾಧವ ಸೋಲಾಪುರದ ತಹಶೀಲ್ದಾರರಿಗೆ ನೀಡಿರುವ ಮರಣ ಪೂರ್ವ ಹೇಳಿಕೆಯಲ್ಲಿ ತಿಳಿಸಿದ್ದಾನೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹಿಲೋರಿ ಹೇಳಿದ್ದಾರೆ.
ಇಲ್ಲಿಯ ನೀಲಕಂಠೇಶ್ವರ ವಿದ್ಯಾಮಂದಿರದಲ್ಲಿ ನವೆಂಬರ್ 28ರಂದು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ತೀವ್ರವಾಗಿ ಗಾಯಗೊಂಡಿದ್ದ ನಾಲ್ಕನೇ ತರಗತಿಯ ವಿದ್ಯಾರ್ಥಿ ಅಜಯ್ನನ್ನು ಸೋಲಾಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಆತ ಭಾನುವಾರ ಮೃತಪಟ್ಟ. ಈ ಘಟನೆ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇದೇ ಮೊದಲ ಬಾರಿಗೆ ಈ ಪ್ರಕಟಣೆ ನೀಡಿದ್ದಾರೆ.
`ಅಜಯ್ ಶಾಲೆಗೆ ಹೋಗಲು ನಿರಾಕರಿಸಿದ್ದರಿಂದ ಅವನ ತಾಯಿ ಪುಷ್ಪಾ ಒಂದು ಏಟು ಕೊಟ್ಟಿದ್ದಕ್ಕೆ ಈ ರೀತಿ ಮಾಡಿಕೊಂಡಿದ್ದಾನೆ' ಎಂದು ಅವನ ತಂದೆ ಪ್ರಮೋದ ಜಾಧವ್ ನೀಡಿರುವ ಹೇಳಿಕೆ ಆಧರಿಸಿ ಸೋಲಾಪುರದ ಜೈಲು ರಸ್ತೆಯ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ' ಎಂದು ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತನಿಖೆ:`ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಶೀಘ್ರವೇ ಸಮಗ್ರ ವರದಿ ಸಲ್ಲಿಸಲಾಗುವುದು' ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ. ವನಿತಾ ತೊರವಿ ಹೇಳಿದ್ದಾರೆ.