ವಾರಾಣಸಿ (ಪಿಟಿಐ): ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಪಾದನೆ ಮೇಲೆ ವಾರಾಣಸಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ಅವರ ವಿರುದ್ಧ ಸೋಮವಾರ ಎಫ್ಎಆರ್ ದಾಖಲಾಗಿದೆ.
ಮತ ಚಲಾಯಿಸಲು ಮತಗಟ್ಟೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅವರ ಕುರ್ತಾದ ಮೇಲೆ ಪಕ್ಷದ ಚಿಹ್ನೆ ಇತ್ತು ಎಂದು ಆರೋಪಿಸಲಾಗಿದೆ.
ರಾಯ್ ಅವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯ 126 ಮತ್ತು 130ನೇ ಕಲಂ ಹಾಗೂ ಭಾರತೀಯ ದಂಡ ಸಂಹಿತೆಯ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕುರಿತ 171 (ಎಚ್) ಕಲಂ ಅನ್ವಯ ಸಿಗ್ರಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನೀತಿ ಸಂಹಿತೆ ಉಲ್ಲಂಘನೆ ಕುರಿತಂತೆ ವಿಶೇಷ ವೀಕ್ಷಕರಾದ ಪ್ರವೀಣ್ ಕುಮಾರ್ ಅವರು ನೀಡಿದ ವರದಿ ಅನ್ವಯ ಚುನಾವಣಾ ಆಯೋಗವು ಜಿಲ್ಲಾ ಆಡಳಿತಕ್ಕೆ ರಾಯ್ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿತು.
ರಮಾಕಾಂತ್ ನಗರದ ಚೇತ್ಗಂಜ್ ಪ್ರದೇಶದಲ್ಲಿನ ಮತಗಟ್ಟೆಗೆ ಸೋಮವಾರ ಬೆಳಿಗ್ಗೆ ಕುಟುಂಬ ಸದಸ್ಯರ ಜತೆ ಬಂದ ರಾಯ್ ಅವರ ಕುರ್ತಾದ ಮೇಲೆ ಕಾಂಗ್ರೆಸ್ ಚಿಹ್ನೆ ಇರುವ ಬ್ಯಾಡ್ಜ್ ಇತ್ತು. ಇದಕ್ಕೆ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು.