ಕೋಲಾರ: ಜನಲೋಕಪಾಲ್ ಮಸೂದೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ದೆಹಲಿಯಲ್ಲಿ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರಿಗೆ ಬೆಂಬಲ ನೀಡಿ ನಗರದಲ್ಲಿ ಶುಕ್ರವಾರ ಹಲವು ಸಂಘಟನೆಗಳು ನಗರದ ಗಾಂಧಿ ವನದಲ್ಲಿ ಮೌನ ಧರಣಿ, ದೀಪದ ಮೆರವಣಿಗೆ ನಡೆಸಿದರು.
ಧರಣಿ ಕುಳಿತ ವಿವಿಧ ಸಂಘಟನೆಗಳ ಮುಖಂಡರು ಭ್ರಷ್ಟಾಚಾರ ನಿರ್ಮೂಲನೆಗೆ ಅಗತ್ಯವಿರುವ ಎಲ್ಲ ಕ್ರಮವನ್ನೂ ಕೈಗೊಳ್ಳಬೇಕು. ಹಜಾರೆಯವರ ಬೇಡಿಕೆಯನ್ನು ಈಡೇರಿಸುವಲ್ಲಿ ಕೇಂದ್ರ ಸರ್ಕಾರ ಬದ್ಧತೆ ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.
ಏ. 12ರಂದು ಅಣ್ಣಾ ಹಜಾರೆ ಹಮ್ಮಿಕೊಂಡಿರುವ ಜೈಲ್ ಭರೋ ಚಳವಳಿಯಲ್ಲಿ ಜಿಲ್ಲೆಯ ಸಮಸ್ತ ಪ್ರಜ್ಞಾವಂತರು ಪಾಲ್ಗೊಳ್ಳಬೇಕು ಎಂದು ಕೋರಿದರು. ವಕ್ಕಲೇರಿ ರಾಜಪ್ಪ, ಸೂಲಿಕುಂಟೆ ರಮೇಶ್, ವರದೇನಹಳ್ಳಿ ವೆಂಕಟೇಶ್, ರಾಮೇಗೌಡ, ಅಬ್ಬಣಿ ನಾಗರಾಜ್, ಸಿ.ವಿ.ನಾಗರಾಜ್ ಪಾಲ್ಗೊಂಡಿದ್ದರು.
ಭಾರತ ಸೇವಾದಳದ ಪದಾಧಿಕಾರಿಗಳು ಕೂಡ ಸಂಜೆ ಗಾಂಧಿವನದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಹಾರ ಹಾಕಿ ಅಣ್ಣಾ ಹಜಾರೆಯವರ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದರು. ಪ್ರಮುಖರಾದ ಬಿ.ಎಂ.ಮುಬಾರಕ್, ಮಂಜುನಾಥ್, ಸುಧಾಕರ್, ರವಿ, ಶ್ರೀನಿವಾಸ್, ನಟರಾಜ್, ಡಿ.ಎಂ.ವೆಂಕಟೇಶ್, ನಾಗರಾಜ್, ನಾರಾಯಣಸ್ವಾಮಿ, ಎಲ್.ಶ್ರೀನಿವಾಸ್ ಪಾಲ್ಗೊಂಡಿದ್ದರು.