ಶಿವಮೊಗ್ಗ: ‘ಭದ್ರಾವತಿಯಲ್ಲಿ ದಲಿತ ಬಾಲಕಿ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣವನ್ನು ಮುಚ್ಚಿಹಾಕುತ್ತಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಗುರುವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಭದ್ರಾವತಿಯಲ್ಲಿ ವಕೀಲರಾಗಿರುವ ನಂಜಪ್ಪ ಅವರ ಮನೆಯಲ್ಲಿ ಚಿಕ್ಕಂದಿನಿಂದಲೂ ಕೆಲಸ ಮಾಡಿಕೊಂಡಿದ್ದ ಬಾಲಕಿ 9ನೇ ತರಗತಿ ಓದುತ್ತಿದ್ದು, ಆಕೆಯ ಮೇಲೆ ನಂಜಪ್ಪ ಅವರ ಪುತ್ರ ಕಾರ್ತಿಕ್ ಒಂದೂವರೆ ವರ್ಷದಿಂದ ದೌರ್ಜನ್ಯ ನಡೆಸಿದ್ದಾನೆ ಎಂದು ಸಮಿತಿ ಪದಾಧಿಕಾರಿಗಳು ಆರೋಪಿಸಿದರು.
ಸಂತ್ರಸ್ಥ ಬಾಲಕಿಗೆ ` 5 ಲಕ್ಷ ಪರಿಹಾರ ಹಾಗೂ ಅತ್ಯಾಚಾರ ನಡೆಸಿದವನಿಗೆ ಮತ್ತು ಗರ್ಭಪಾತ ಮಾಡಿಸಿರುವ ಅಪರಾಧಿಗಳಿಗೆ, ಸಹಕರಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವವನ್ನು ದಸಂಸ ಜಿಲ್ಲಾ ಸಂಚಾಲಕ ಚಿನ್ನಯ್ಯ, ಪದಾಧಿಕಾರಿಗಳಾದ ಕೆ.ಎ.ರಾಜ್ಕುಮಾರ್, ಎಂ.ಪಳನಿರಾಜ್, ಎಂ.ರಂಗಪ್ಪ, ಪ್ರಕಾಶ ಲಿಗಾಡಿ ವಹಿಸಿದ್ದರು.