ನವದೆಹಲಿ (ಪಿಟಿಐ): ಅತ್ಯಾಚಾರ ಆರೋಪಿಗಳನ್ನು `ನಪುಂಸಕ'ರನ್ನಾಗಿಸುವ ಮೂಲಕ ಅವರಿಗೆ ಗರಿಷ್ಠ ಪ್ರಮಾಣದ ಶಿಕ್ಷೆ ಸಿಗುವಂತೆ ನೋಡಿಕೊಳ್ಳಬೇಕು, ಇದಕ್ಕಾಗಿ ಈಗಿರುವ ಕಾನೂನುಗಳಿಗೆ ತಿದ್ದುಪಡಿ ತರಬೇಕು ಎನ್ನುವ ಬೇಡಿಕೆಯನ್ನು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಮಮತಾ ಶರ್ಮಾ ಮುಂದಿಟ್ಟಿದ್ದಾರೆ.
ಯುವತಿಯ ಮೇಲೆ ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಶರ್ಮಾ, `ನಮ್ಮ ದೇಶದಲ್ಲಿ ಮಹಿಳೆಯರು ಸುರಕ್ಷಿತರಾಗಿದ್ದಾರೆ ಎಂದು ನನಗನಿಸುತ್ತಿಲ್ಲ' ಎಂದರು.
`ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವುದು ಅತ್ಯಗತ್ಯ. ಈ ಶಿಕ್ಷೆ ಹೇಗಿರಬೇಕು ಎಂದರೆ ಅದನ್ನು ಆರೋಪಿಗಳು ಪ್ರತಿದಿನವೂ ನೆನೆಸಿಕೊಳ್ಳುವಂತಿರಬೇಕು' ಎಂದು ಅವರು ಪ್ರತಿಪಾದಿಸಿದರು.
ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ದಿಸೆಯಲ್ಲಿ ಕಾನೂನು ತಿದ್ದುಪಡಿ ಕೈಗೊಳ್ಳುವ ಸರ್ವಾನುಮತದ ನಿರ್ಣಯವನ್ನು ಆಯೋಗ ಒಂಬತ್ತು ರಾಜ್ಯಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಕೈಗೊಂಡಿದೆ. ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ಕನಿಷ್ಠ ಡಿಎಸ್ಪಿ ಹಂತದ ಪೊಲೀಸ್ ಅಧಿಕಾರಿ ನೇತೃತ್ವದಲ್ಲೇ ನಡೆಸಬೇಕು ಹಾಗೂ ಈ ಕುರಿತಾದ ತನಿಖಾ ವರದಿ ಒಂದು ತಿಂಗಳೊಳಗೆ ಸಲ್ಲಿಕೆಯಾಗಬೇಕು ಎಂದೂ ಶರ್ಮಾ ಒತ್ತಾಯಿಸಿದರು.