ಸೋಮವಾರಪೇಟೆ: ಇಲ್ಲಿನ ಜೈಭಾರತ್ ಯುವಕ ಸಂಘದ ಆಶ್ರಯದಲ್ಲಿ 14ನೇ ವರ್ಷದ ಗೌರಿ– ಗಣೇಶ ವಿಸರ್ಜನೋತ್ಸವ ಶನಿವಾರ ನಡೆಯಿತು.
ಬೆಳಿಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು, ಪ್ರಸಾದ ವಿನಿಯೋಗ ಮತ್ತು ಸಾರ್ವಜನಿಕರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು. ಸಂಜೆ 7 ಗಂಟೆಗೆ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಭವ್ಯಮಂಟಪದಲ್ಲಿ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮೂಲಕ ತೆರಳಿ, ಸಮೀಪದ ಆನೆಕೆರೆಯಲ್ಲಿ ಉತ್ಸವ ಮೂರ್ತಿಗಳನ್ನು ವಿಸರ್ಜಿಸಲಾಯಿತು.
ಯುವಕ ಸಂಘದ ಅಧ್ಯಕ್ಷ ಎಸ್.ಎಸ್. ಸುಬ್ರಮಣಿ, ಪ್ರಧಾನ ಕಾರ್ಯದರ್ಶಿ ಎಚ್.ಎನ್. ಗಣೇಶ್, ಖಜಾಂಚಿ ಎಸ್.ಜಿ. ಕೃಷ್ಣ, ಮಂಜುನಾಥ್, ರಘು ಪಾಲ್ಗೊಂಡಿದ್ದರು.
ಶಾಲೆಗೆ ಮನಃಶಾಸ್ತ್ರಜ್ಞರ ಭೇಟಿ
ಮಡಿಕೇರಿ: ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಸುಂಟಿಕೊಪ್ಪದ ವಿಶೇಷ ಮಕ್ಕಳ ಶಾಲೆ ಸ್ವಸ್ಥ ಸಂಸ್ಥೆಯಲ್ಲಿ ಆಯೋಜಿಸಿದ್ದ ಮಕ್ಕಳ ಆರೋಗ್ಯ ತಪಾಸಣೆ ಕಾಯರ್ಕ್ರಮದಲ್ಲಿ ಮಡಿಕೇರಿಯ ಮನಃಶಾಸ್ತ್ರ ತಜ್ಞ ಡಾ.ರೂಪೇಶ್ ಗೋಪಾಲ್ ಆರೋಗ್ಯ ತಪಾಸಣೆ ಮಾಡಿ, ಅಗತ್ಯ ಸಲಹೆ ಸೂಚನೆ ನೀಡಿದರು.
ರೋಟರಿ ಸಹಾಯಕ ಗರ್ವನರ್ ಬಿ.ಕೆ. ರವೀಂದ್ರ ರೈ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಡಾ.ಸಿ.ಆರ್. ಪ್ರಶಾಂತ್ ಹಾಜರಿದ್ದರು. ತಂಡದೊಂದಿಗೆ ಫಿಸಿಯೋಥೆರಪಿಸ್ಟ್ ಡಾ.ಸುಕುಮಾರ್ ಮಕ್ಕಳ ತಪಾಸಣೆ ನಡೆಸಿದರು.