ವಿಜಾಪುರ: ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ದಾಸ ಸಾಹಿತ್ಯ ಪ್ರಾಜೆಕ್ಟ್ನವರು ಸ್ಥಳೀಯ ಭಜನಾ ಮಂಡಳಿಗಳು ಹಾಗೂ ಶ್ರೀಗುರು ರಾಘವೇಂದ್ರ ಸೇವಾ ಸಮಿತಿಯ ಸಹಯೋಗದಲ್ಲಿ ಭಾನುವಾರ ಇಲ್ಲಿ ಸಂಘಟಿಸಿದ್ದ `ಶ್ರೀನಿವಾಸ ಕಲ್ಯಾಣ ಮಹೋತ್ಸವ~ ಅದ್ದೂರಿಯಾಗಿ ನೆರವೇರಿತು.
ಶ್ರೀನಿವಾಸ ದೇವರು ಹಾಗೂ ಪದ್ಮಾವತಿ ದೇವಿಯ ವಿವಾಹ ಮಹೋತ್ಸವ ಯಾವ ರೀತಿ ನಡೆಯಿತು ಎಂಬುದನ್ನು ಇಲ್ಲಿ ಅವರ ವಿಗ್ರಹಗಳಿಗೆ ಶಾಸ್ತ್ರೋಕ್ತವಾಗಿ ವಿವಾಹ ನೆರವೇರಿಸುವ ಮೂಲಕ ತೋರಿಸಲಾಯಿತು.
`ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ನ ದಾಸ ಸಾಹಿತ್ಯ ಪ್ರಾಜೆಕ್ಟ್ನವರು ಲೋಕ ಕಲ್ಯಾಣಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಸ್ಥಳೀಯ ಸಂಘಟನೆಗಳ ನೆರವಿನೊಂದಿಗೆ ಈ ಕಾರ್ಯಕ್ರಮ ಸಂಘಟಿಸುತ್ತಿದ್ದಾರೆ. ಮಹಿಳಾ ಭಜನಾ ಸಂಘಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಅವರಲ್ಲಿ ಆತ್ಮ ಸ್ಥೈರ್ಯ ಹೆಚ್ಚಿಸುವುದು ಈ ಕಾರ್ಯಕ್ರಮದ ಉದ್ದೇಶ~ ಎಂದು ಸಂಘಟನಾ ಸಮಿತಿಯ ಗೋಪಾಲ ನಾಯಕ ತಿಳಿಸಿದರು.
`ತಿರುಪತಿಗೆ ಹೋಗಿ ಶ್ರೀನಿವಾಸ ಕಲ್ಯಾಣ ಮಹೋತ್ಸವ ನಡೆಸುವ ಸಂಕಲ್ಪ ತೊಟಿದ್ದೆವು. ಕಾರಣಾಂತರಗಳಿಂದ ಆಗಿರಲಿಲ್ಲ.
ಈ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು ನಮ್ಮ ಸಂಕಲ್ಪ ಈಡೇರಿಸಿಕೊಂಡೆವು~ ಎಂದು ಕೆಲ ಭಕ್ತರು ಹೇಳಿದರು.
`ಈ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡರೆ ತಿರುಪತಿಗೆ ಹೋಗಿ ಬಂದಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ~ ಎಂದು ಪಂಡಿತರು ತಿಳಿಸಿದರು.
ಸಂಸದ ರಮೇಶ ಜಿಗಜಿಣಗಿ, ಶಾಸಕ ಅಪ್ಪು ಪಟ್ಟಣಶೆಟ್ಟಿ, ಪ್ರಮುಖರಾದ ಸಂಗರಾಜ ದೇಸಾಯಿ, ಪ್ರಕಾಶ ಅಕ್ಕಲಕೋಟೆ ಇತರರು ಪಾಲ್ಗೊಂಡಿದ್ದರು.
ಬೆಳಿಗ್ಗೆ 5ರಿಂದ ಭಕ್ತರು ಹಾಗೂ ಭಜನಾ ಮಂಡಳಿಗಳವರಿಂದ ಸುಪ್ರಭಾತ ಕಾರ್ಯಕ್ರಮ ನಡೆಯಿತು.
ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ನ ದಾಸ ಸಾಹಿತ್ಯ ಪ್ರಾಜೆಕ್ಟ್ನ ಮುಖ್ಯಸ್ಥ ಆನಂದತೀರ್ಥಾಚಾರ್ಯ ಪಗಡಾಲ ವಿವಾಹ ಮಹೋತ್ಸವದ ನೇತೃತ್ವ ವಹಿಸಿದ್ದರು.