ಹರಪನಹಳ್ಳಿ: ಆಡಳಿತ ಮಂಡಳಿ ಅನುಮೋದಿಸಿದ ಯೋಜನೆ ಜಾರಿಯಲ್ಲಿ ಪಕ್ಷಪಾತ ಧೋರಣೆ, ವಿಳಂಬ ನೀತಿ, ಸದಸ್ಯರ ಅಭಿವ್ಯಕ್ತ ಪ್ರಶ್ನೆಗಳಿಗೆ ವಿರುದ್ಧವಾಗಿ ಸಭೆ ನಡಾವಳಿ ಕರಡು ರಚನೆ, ಶಾಸಕರ ಆಪ್ತಸಹಾಯಕನ ಕೈಗೊಂಬೆಯಂತೆ ವರ್ತಿಸುತ್ತಿರುವ ಆರೋಪ ಹೊತ್ತ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಟಿ. ಪಾಂಡ್ಯಪ್ಪ ವಿರುದ್ಧ ಶಿಸ್ತುಕ್ರಮದ ನಿರ್ಣಯಕ್ಕೆ ಸದನ ಒಮ್ಮತದ ನಿರ್ಣಯ. ಡಾ.ಬಿ.ಆರ್. ಅಂಬೇಡ್ಕರ್ ನಿಗಮದ ಅಧಿಕಾರಿ ವರ್ತನೆ ವಿರೋಧಿಸಿ ಸಭಾತ್ಯಾಗ...
- ಇವು ತಾ.ಪಂ. ರಾಜೀವ್ಗಾಂಧಿ ಸಭಾಂಗಣದಲ್ಲಿ ಆಡಳಿತ ಮಂಡಳಿಯ ಎರಡನೇ ಅವಧಿಯ ನೂತನ ಅಧ್ಯಕ್ಷೆ ಗಂಗಮ್ಮ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಂಡು ಬಂದ ಮುಖ್ಯಾಂಶಗಳು. ಒಂದುಗಂಟೆ ತಡವಾಗಿ ಆರಂಭವಾದ ಸಭೆಯಲ್ಲಿ, ಈಚೆಗೆ ನಿಧನರಾದ ಮಾಜಿ ಪ್ರಧಾನಿ ಐ.ಕೆ. ಗುಜ್ರಾಲ್ ಹಾಗೂ ಸ್ಥಳೀಯ ಉಪ ನೋಂದಣಾಧಿಕಾರಿ ಎಸ್. ರಾಜಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಬಸವ ವಸತಿ ಯೋಜನೆ ಅಡಿ ಆಯ್ಕೆ ಮಾಡಲಾದ ಹಳೇ ಫಲಾನುಭವಿ ಪಟ್ಟಿ ರದ್ದುಪಡಿಸಿ, ಬಳಿಕ, ಹೊಸ ಆಯ್ಕೆಪಟ್ಟಿ ತಯಾರಿಸಲಾಗಿದೆ. ಶಾಸಕರ ಆಪ್ತಸಹಾಯಕನ ಆದೇಶದ ಅನುಸಾರ ಪುನಃ, ಆ ಆಯ್ಕೆ ರದ್ದುಪಡಿಸಿ, ಮತ್ತೆ ಹಳೆಯ ಪಟ್ಟಿ ಪುರಸ್ಕರಿಸಲಾಗಿದೆ. ಬಿಜೆಪಿ ಕಾರ್ಯಕರ್ತರು ತಯಾರಿಸಿದ ಪಟ್ಟಿಯನ್ನೇ ಮಾನ್ಯಮಾಡುವಂತೆ, ಸ್ವತಃ ಕಾರ್ಯನಿರ್ವಹಣಾಧಿಕಾರಿ, ಗ್ರಾ.ಪಂ. ಪಿಡಿಒಗಳಿಗೆ ಸೂಚನೆ ನೀಡಿದ್ದಾರೆ ಎಂದು ಸದಸ್ಯ ಎಸ್.ಬಿ. ಹನುಮಂತಪ್ಪ, ಉಪಾಧ್ಯಕ್ಷ ಹನುಮಂತಪ್ಪ, ಮಂಜುನಾಥ, ಒಇ ಪಾಂಡ್ಯಪ್ಪ ವಿರುದ್ಧ ಆರೋಪಿಸಿದರು. ಇದಕ್ಕೆ ರಾಜಪ್ಪ, ಓಬಪ್ಪ ಧ್ವನಿಗೂಡಿಸಿದರು.
ಆರೋಪಕ್ಕೆ ಇಒ ಪಾಂಡ್ಯಪ್ಪ ನೀಡಿದ ಪ್ರತಿಕ್ರಿಯೆ ಸದಸ್ಯರ ಮತ್ತಷ್ಟು ಆಕ್ರೋಶಕ್ಕೆ ತುತ್ತಾಯಿತು.