ಸಕಲೇಶಪುರ: ತಾಲ್ಲೂಕಿನ ಹಲಸುಲಿಗೆ ಗ್ರಾ.ಪಂನ ಗ್ರಾಮ ಸಭೆಗೆ ನೋಡೆಲ್ ಅಧಿಕಾರಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಗೈರು ಹಾಜರಿ ವಿರೋಧಿಸಿ, ಗ್ರಾ.ಪಂ. ಅಧ್ಯಕ್ಷೆ, ಉಪಾಧ್ಯಕ್ಷರೂ ಸೇರಿದಂತೆ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.
ಬೆಳಿಗ್ಗೆ 11ಕ್ಕೆ ಆರಂಭಗೊಳ್ಳಬೇಕಿದ್ದ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕ ತಪಾಸಣೆ ಹಾಗೂ ಗ್ರಾಮ ಸಭೆಗೆ ಯಾವುದೇ ಅಧಿಕಾರಿಯೂ ಸಹ ಬರಲಿಲ್ಲ. ಅಧಿಕಾರಿಗಳು ಇದೇ ರೀತಿ ಗೈರು ಹಾಜರಾಗಿದ್ದ ಕಾರಣದಿಂದಾಗಿ ಕಳೆದ ತಿಂಗಳ 29ರಂದು ನಡೆಯಬೇಕಿದ್ದ ಗ್ರಾಮ ಸಭೆ ಗುರುವಾರಕ್ಕೆ ಮುಂದೂಡಲ್ಪಟ್ಟಿತ್ತು. ಈ ಸಭೆಗೂ ಸಹ ಅಧಿಕಾರಿಗಳು ಹಾಜರಾಗದೇ ಇದ್ದ ಕಾರಣ, ಗ್ರಾಮಸ್ಥರು ಆಕ್ರೋಶಗೊಂಡರು. ಗ್ರಾ.ಪಂ. ಅಧ್ಯಕ್ಷೆ ಸುಶೀಲಾ ಸದಾಶಿವ, ಉಪಾಧ್ಯಕ್ಷ ಸುರೇಶ್ ಆಳ್ವ, ಗ್ರಾ.ಪಂ.ಸದಸ್ಯರು ಹಾಗೂ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಗ್ರಾಮಸ್ಥರು ಪಂಚಾಯ್ತಿ ಮುಂದೆ ಅಧಿಕಾರಿಗಳ ವಿರುದ್ಧ ಧರಣಿ ನಡೆಸಿದರು.