ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ವೇಳೆ ಪಡುಬಿದ್ರಿ ಬೈಪಾಸ್ ನಿರ್ಮಾಣದ ಆದೇಶ ಕೈಬಿಟ್ಟಿರುವ ಬಗ್ಗೆ ಅಧಿಕೃತವಾಗಿ ಆದೇಶ ಹೊರಡಿಸಿರುವುದನ್ನು ವಿರೋಧಿಸಿ ಪಡುಬಿದ್ರಿಯ ಬೈಪಾಸ್ ವಿರೋಧಿ ಹೋರಾಟಗಾರರು ಲೋಕಸಭಾ ಚುನಾವಣೆ ಬಹಿಷ್ಕರಿಸುವ ಬಗ್ಗೆ ನಿರ್ಧರಿಸಿದ್ದಾರೆ.
ಪಡುಬಿದ್ರಿ ಗುರುದೇವ್ ಟಾಕೀಸ್ ಹಿಂಭಾಗದ ದಲಿತ ಕಾಲೊನಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಪಡುಬಿದ್ರಿ ದ.ಸಂ.ಸ ಘಟಕಾಧ್ಯಕ್ಷ ಲೋಕೇಶ್ ಕಂಚಿನಡ್ಕ ಈ ಬಗ್ಗೆ ಮಾಹಿತಿ ನೀಡಿದರು.
ರಾ.ಹೆ. ಚತುಷ್ಪಥ ಕಾಮಗಾರಿ ವೇಳೆ ಹೆದ್ದಾರಿ ಪ್ರಾಧಿಕಾರ ಪಡುಬಿದ್ರಿಯಲ್ಲಿ 3ಕಿ.ಮೀ. ದೂರದ ಬೈಪಾಸ್ ಯೋಜನೆಗೆ ಮುಂದಾಗಿತ್ತು. ಈ ಬಗ್ಗೆ ಹಲವಾರು ಹೋರಾಟಗಳು ನಡೆದಿವೆ. ಕಳೆದ ಕೆಲವು ತಿಂಗಳ ಹಿಂದೆ ಬೈಪಾಸ್ ಯೋಜನೆ ಕೈಬಿಟ್ಟಿರುವುದಾಗಿ ಹೇಳಿದ್ದರೂ ಅಧಿಕೃತ ದಾಖಲೆ ನೀಡುತ್ತಿಲ್ಲ. ಬೈಪಾಸ್ ಯೋಜನೆಯಿಂದ 28ದಲಿತ ಮನೆಗಳ ಕಾಲೊನಿ ಸಹಿತ ಸುಮಾರು 45ಕ್ಕೂ ಅಧಿಕ ಮನೆಗಳ ಕುಟುಂಬಸ್ಥರು ಸಂತ್ರಸ್ತರಾಗಲಿದ್ದಾರೆ.
ಚುನಾವಣೆಗೆ ಮುನ್ನ ಪಡುಬಿದ್ರಿ ಹೆದ್ದಾರಿ ವಿಸ್ತರಣೆ ದಾಖಲಾತಿ ಪ್ರತಿಯನ್ನು ನೀಡಬೇಕು ತಪ್ಪಿದಲ್ಲಿ ಪಡುಬಿದ್ರಿ ಹಾಗೂ ಆಸುಪಾಸಿನ ದಲಿತರು, ಅವರ ಸಂಬಂಧಿಕರು, ಹಾಗೂ ಸಂಭಾವ್ಯ ಸಂತ್ರಸ್ಥರು ಚುನಾವಣಾ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾಗಿ ಹೇಳಿದ್ದಾರೆ.
ಭಾನುವಾರ ಬೆಳಿಗ್ಗೆಯಿಂದಲೇ ಈ ಬಗ್ಗೆ ಸಭೆ ಕರೆದು ಸರ್ವರ ಅಭಿಪ್ರಾಯ ಕರೆದು ಈ ನಿರ್ಧಾರ ಕೈಗೊಳ್ಳಲಾಗಿದೆ. ಯಾರೊಬ್ಬರೂ ಯಾವುದೇ ಪ್ರಭಾವಕ್ಕೆ ಒಳಗಾಗುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಕಳೆದ ಚುನಾವಣೆ ಸಂದರ್ಭ ಚುನಾವಣೆ ಬಹಿಷ್ಕಾರ ಹಾಕಿದ್ದಾಗ ಕಾಂಗ್ರೆಸ್ನ ರಾಜ್ಯ ಮುಖಂಡ ನಾರಾಯಣ ಸ್ವಾಮಿ ಬೈಪಾಸ್ ಯೋಜನೆ ರದ್ದುಗೊಳಿಸಿದ ಬಗ್ಗೆ ನನ್ನ ಬಗ್ಗೆ ದಾಖಲೆ ಇದೆ ಎಂದು ಪೊಳ್ಳು ಭರವಸೆ ನೀಡಿದ್ದರು. ಈ ಬಗ್ಗೆ ದಾಖಲಾತಿ ಪ್ರತಿ ಕೇಳಿದಾಗ ನಿರಾಕರಿಸುತ್ತಿದ್ದಾರೆ. ಹಾಗಾಗಿ ನಾವು ಈ ನಿರ್ಧಾರ ಕೈಗೊಂಡಿರುವುದಾಗಿ ಲೋಕೇಶ್ ಕಂಚಿನಡ್ಕ ಹೇಳಿದ್ದಾರೆ.
ಈ ಬಗ್ಗೆ ಚುನಾವಣಾ ಆಯೋಗ, ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಸಹಿತ ಸಂಬಂಧಿತ ಇಲಾಖೆಗಳಿಗೆ ನಿರ್ಣಯ ಪ್ರತಿ ಕಳುಹಿಸಲಾಗುವುದು ಎಂದೂ ಲೋಕೇಶ್ ಕಂಚಿನಡ್ಕ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಇಮ್ತಿಯಾಜ್ ಪಡುಬಿದ್ರಿ, ಮೊಹಮ್ಮದ್ ರಫೀಕ್ ಮತ್ತಿತರರು ಉಪಸ್ಥಿತರಿದ್ದರು.