ಬೆಂಗಳೂರು: ಸಾಗರದ ಲೋಹಿಯಾ ಜನ್ಮ ಶತಾಬ್ದಿ ಪ್ರತಿಷ್ಠಾನವು ಇದೇ ತಿಂಗಳ 22 ಹಾಗೂ 23ರಂದು ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಶತಮಾನೋತ್ಸವ ಭವನದಲ್ಲಿ `ಹೊಸ ಸಮಾಜವಾದದ ಅನ್ವೇಷಣೆ~ ಎಂಬ ವಿಷಯ ಕುರಿತ ಎರಡು ದಿನಗಳ ಅಧ್ಯಯನ ಶಿಬಿರವನ್ನು ಆಯೋಜಿಸಿದೆ.
`ಜಾಗತಿಕ ಮತ್ತು ಭಾರತದ ಸಮಾಜವಾದಿ ಆಂದೋಲನಗಳ ಚರಿತ್ರೆ ಮತ್ತು ಅವುಗಳ ಹಿಂದಿನ ತಾತ್ವಿಕತೆಗಳ ವಿಮರ್ಶೆಯ ಆಧಾರದ ಮೇಲೆ ಮತ್ತು ಜಾಗತೀಕರಣದ ಪರಿಣಾಮಗಳ ಹಿನ್ನೆಲೆಯಲ್ಲಿ ಇಂದಿಗೆ ಪ್ರಸ್ತುತವಾಗಬಹುದಾದ ಹೊಸ ಸಮಾಜವಾದದ ಕಲ್ಪನೆಯನ್ನು ರೂಪಿಸುವ ಪ್ರಯತ್ನವನ್ನು ಈ ಅಧ್ಯಯನ ಶಿಬಿರದಲ್ಲಿ ಮಾಡಲಾಗುತ್ತದೆ~ ಎಂದು ಪ್ರಕಟಣೆ ತಿಳಿಸಿದೆ.
ನಾಡಿನ ಖ್ಯಾತ ಮತ್ತು ಪ್ರತಿಭಾವಂತ ಚಿಂತಕರು ಹಾಗೂ ಕ್ರಿಯಾಶೀಲರು ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಲಿದ್ದು, ಚರ್ಚೆಯಲ್ಲಿಯೂ ಪಾಲ್ಗೊಳ್ಳಲಿದ್ದಾರೆ.
ಶಿಬಿರಾರ್ಥಿಗಳಾಗಿ ಪಾಲ್ಗೊಳ್ಳ ಬಯಸುವವರು ಈ ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಶಿಬಿರಾರ್ಥಿಗಳಿಗೆ ಎರಡು ದಿನಗಳ ವಸತಿ ಮತ್ತು ಊಟೋಪಚಾರದ ವ್ಯವಸ್ಥೆ ಮಾಡಲಾಗುವುದು.
ಪ್ರವೇಶ ಶುಲ್ಕ: ನೂರು ರೂಪಾಯಿ. ನೋಂದಣಿ ಮಾಡಿಕೊಳ್ಳಲು ಕೊನೇ ದಿನಾಂಕ ಈ ತಿಂಗಳ 15. ಐವತ್ತು ಮಂದಿಗೆ ಮಾತ್ರ ಪ್ರವೇಶಾವಕಾಶ ಇರುವುದರಿಂದ ಮೊದಲು ಸಂಪರ್ಕಿಸಿದವರಿಗೆ ಆದ್ಯತೆ. ಸಂಪರ್ಕಕ್ಕಾಗಿ: 9448238638 (ಎಂ. ರಾಘವೇಂದ್ರ, ಕಾರ್ಯದರ್ಶಿ) ಹಾಗೂ 9731929731 (ಎನ್.ಎಂ. ಕುಲಕರ್ಣಿ, ಖಜಾಂಚಿ).