ಬಸ್ನಲ್ಲಿ ಪರಿಚಯವಾಗುವ ಮಗು ಕಥಾನಾಯಕಿ ನಳಿನಿಗೆ ಆತ್ಮೀಯವಾಗುತ್ತದೆ. ಅರ್ಧದಾರಿಯಲ್ಲೇ ಅದರ ಅಪ್ಪ ಇಳಿದು ಹೋದಾಗ ಆ ಮಗುವಿನ ಜವಾಬ್ದಾರಿ ನಳಿನಿಯ ಮೇಲೇ ಬೀಳುತ್ತದೆ. ಮಗುವನ್ನು ಮನೆಗೆ ಕರೆದುಕೊಂಡು ಬರುವ ನಳಿನಿ ಎದುರಿಸುವ ಸವಾಲುಗಳು `ಅನುವಾದ~ ಧಾರಾವಾಹಿಯ ಕಥಾವಸ್ತು. ನೂರು ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ಮುಂದುವರೆದಿರುವ ಧಾರಾವಾಹಿ ತಂಡ ಈಚೆಗೆ ಸಂತೋಷಕೂಟ ಹಮ್ಮಿಕೊಂಡಿತ್ತು.
`ಅನುವಾದ~ ಜಯಂತ್ ನಿರ್ದೇಶನದ ಧಾರಾವಾಹಿ. ನಟಿ ವಿದ್ಯಾ ವೆಂಕಟರಾಮನ್ ನಿರ್ಮಿಸಿರುವ ಈ ದೈನಿಕ ಧಾರಾವಾಹಿ, `ಈಟೀವಿ~ಯಲ್ಲಿ ಸಂಜೆ 6ಕ್ಕೆ ಪ್ರಸಾರವಾಗುತ್ತದೆ. ಈ ಅವಧಿಯಲ್ಲಿ ಪ್ರಸಾರಗೊಳ್ಳುವ ಧಾರಾವಾಹಿಗಳು ಜನಪ್ರಿಯತೆ ಪಡೆಯುವುದು ಕಷ್ಟ ಎನ್ನುವ ನಂಬಿಕೆಯನ್ನು `ಅನುವಾದ~ ಸುಳ್ಳು ಮಾಡಿದೆ. ಇದು ಸಾಧ್ಯವಾಗಿರುವುದು ಜಯಂತ್ ಅವರ ಸಮರ್ಥ ನಿರ್ದೇಶನದಿಂದ ಎಂದು ತಂಡ ಮನದುಂಬಿ ಪ್ರಶಂಸಿಸಿತು.
`ತಮ್ಮ ಧಾರಾವಾಹಿಯಲ್ಲಿ ಮನರಂಜನೆಯೊಂದಿಗೆ ಸಂಬಂಧದ ಮೌಲ್ಯಗಳನ್ನು ಹೇಳಲಾಗಿದೆ. ಸಂಭಾಷಣೆ ಬರೆದಿರುವ ಡಾ.ಕಶ್ಯಪ್ ಪಾತ್ರವೊಂದರಲ್ಲಿ ನಟಿಸಿಯೂ ಇದ್ದಾರೆ. ಈ ಧಾರಾವಾಹಿಯ ಎಲ್ಲಾ ಪಾತ್ರಗಳ್ಲ್ಲಲೂ ಎರಡು ಆಯಾಮಗಳಿರುವುದು ನೋಡುಗರಿಗೆ ಇಷ್ಟವಾಗಿದೆ~ ಎಂದು ಜಯಂತ್ ಬಣ್ಣಿಸಿದರು.
ಎರಡು ನೂರು ಸಿನಿಮಾ ಮತ್ತು ನೂರು ಧಾರಾವಾಹಿಗಳಲ್ಲಿ ನಟಿಸಿರುವ ಹಿರಿಯ ನಟ ಬೆಂಗಳೂರು ನಾಗೇಶ್ ಅವರಿಗೆ ಇದುವರೆಗೂ ತಾವು ನಟಿಸದ ವಿಭಿನ್ನ ಪಾತ್ರ ಈ ಧಾರಾವಾಹಿಯಲ್ಲಿ ಸಿಕ್ಕಿರುವ ಸಂತಸ ಇದೆ. ಹಿರಿಯ ನಟಿ ಸುಂದರಶ್ರೀ ಜಯಂತ್ ಅವರ ವೃತ್ತಿಪರತೆಯನ್ನು ಕೊಂಡಾಡಿದರು. ಮೈಕೋ ಮಂಜುನಾಥ್, ಹನುಮಂತೇಗೌಡ್, ವಿದ್ಯಾ ವೆಂಕಟರಾಮನ್ ತಮ್ಮ ಅನುಭವ ಹಂಚಿಕೊಂಡರು.