ಹರಿಹರ: ಕ್ರೂಸರ್ ವಾಹನಕ್ಕೆ ಮೆಣಸಿನಕಾಯಿ ಸಾಗಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಐವರು ಅಯ್ಯಪ್ಪಸ್ವಾಮಿ ಭಕ್ತರು ಮೃತಪಟ್ಟು, 8 ಮಂದಿ ತೀವ್ರವಾಗಿ ಗಾಯಗೊಂಡ ಘಟನೆ ನಗರದ ಬೈಪಾಸ್ ರಸ್ತೆಯ ಹರಗನಹಳ್ಳಿ ಕ್ರಾಸ್ ಬಳಿ ಶನಿವಾರ ಬೆಳಗಿನ ಜಾವ ಸಂಭವಿಸಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಒಂಟಿಗುಂಡಿ ಗ್ರಾಮದ ಸಿದ್ದನಾಯ್ಕ ದೇಸಾಯಿ (34), ವಿಠಲ ಮಾದರ (38), ತಿಪ್ಪಣ್ಣ ಮಾದರ (25) ಹಾಗೂ ಚಾಲಕ ಲಕ್ಕಪ್ಪ ಪಿ.ಎಂ. ಗುದ್ಲಿ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ ಅದೇ ಗ್ರಾಮದ ಮಂಜುನಾಥ (20) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇವರು ಜ. 5ರಂದು ಶಬರಿಮಲೆ ಯಾತ್ರೆಗೆ ತೆರಳಿದ್ದರು. 10ರಂದು ಅಯ್ಯಪ್ಪಸ್ವಾಮಿ ದರ್ಶನ ಮಾಡಿ ಮದುರೆ, ಕನ್ಯಾಕುಮಾರಿ, ಮೈಸೂರು ಮೂಲಕ ವಾಪಸ್ ಬರುತ್ತಿದ್ದರು. ಶನಿವಾರ ಬೆಳಗಿನ ಜಾವ 1.45ರ ಸುಮಾರಿಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಪ್ರಕಾಶ್, ರಮೇಶ್, ಕಾಡಪ್ಪ ಗುತ್ತಗಟ್ಟಿ, ಶ್ರೀಕಾಂತ, ಬಸಪ್ಪ ಪೂಜಾರ್, ಸಂಜು ಪಾಟೀಲ್, ವಸಂತ ಹಾಗೂ ಲಕ್ಷ್ಮಣ ಅವರನ್ನು ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಐಜಿಪಿ ಸಂಜಯ ಸಹಾಯ್ಮತ್ತು ಸಿಬ್ಬಂದಿ ಭೇಟಿ ನೀಡಿದ್ದರು.