ಬೇಲೂರು: ಹಾಸನ–ಬೇಲೂರು ರಸ್ತೆಯ ಜೆ. ಸೂರಾಪುರ ಬಳಿ ಮಂಗಳವಾರ ಸಂಜೆ ಸಂಭವಿಸಿದ ವೋಲ್ವೊ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರಿನ ಜೆಪಿ ನಗರದ ತ್ಯಾಗರಾಜ್, ಕಲಾ, ವೇದಾ ಎಂಬುವವರು ಮೃತಪಟ್ಟವರು. ಕಿರಣ್, ಪೂಜಾ ಎಂಬ ಇಬ್ಬರು ಮಕ್ಕಳು ಮತ್ತು ರವಿ ಎಂಬುವವರಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೋಲ್ವೊ ಬಸ್ನಲ್ಲಿದ್ದ ಇಬ್ಬರು ಪ್ರವಾಸಿಗರಿಗೆ ಗಾಯಗಳಾಗಿವೆ. ಬೇಲೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಮತ್ತು ಬೆಂಗಳೂರಿನಿಂದ ಬೇಲೂರು ಕಡೆಗೆ ಬರುತ್ತಿದ್ದ ಕಾರಿನ ನಡುವೆ ಸೋಮವಾರ ಸಂಜೆ 7 ಗಂಟೆಯ ಸಮಯದಲ್ಲಿ ಡಿಕ್ಕಿ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಮೂವರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತದಿಂದಾಗಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನೊಳಗೆ ಸಿಕ್ಕಿಕೊಂಡ ಶವಗಳನ್ನು ಸ್ಥಳೀಯರು ಹಾರೆ ಹಾಗೂ ಮತ್ತಿತರ ಸಾಮಗ್ರಿಗಳಿಂದ ಮೀಟಿ ಹೊರತೆಗೆದರು. ಗಾಯಾಳುಗಳನ್ನು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ಸಂಭವಿಸಿದ ತಕ್ಷಣ ಸ್ಥಳದಲ್ಲಿ ನೂರಾರು ಜನರು ನೆರೆದಿದ್ದರು. ಇದರಿಂದಾಗಿ ಬೇಲೂರು–ಹಾಸನ ನಡುವಿನ ರಸ್ತೆ ಸಂಚಾರ ಕೆಲ ಕಾಲ ಸ್ಥಗಿತಗೊಂಡಿತ್ತು. ಸುದ್ದಿ ತಿಳಿದ ತಕ್ಷಣ ಸರ್ಕಲ್ ಇನ್ಸ್ಪೆಕ್ಟರ್ ಕೆ.ಎಲ್. ಗಣೇಶ್ ಮತ್ತು ಪಿಎಸ್ಐ ಅಶ್ವಿನ್ಕುಮಾರ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಅಪಘಾತ ದೃಶ್ಯ ವೀಕ್ಷಿಸಿ ದಿಗ್ಭ್ರಮೆ ವ್ಯಕ್ತಪಡಿಸಿದರು.