ಹರಿಹರ: ತಾಲ್ಲೂಕು ಹಲಸಬಾಳು ಗ್ರಾಮದ ಬೈಪಾಸ್ ರಸ್ತೆಯ ಸಮೀಪ ಹೊಸ ಸೇತುವೆ ಬಳಿ ಹರಿಹರ ಪಂಚಮಸಾಲಿ ಸ್ಥಿರ ಪೀಠದ ಮಹಾಂತ ಶಿವಾಚಾರ್ಯ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಟಾಟಾ ಸಫಾರಿ ವಾಹನ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ವಾಮೀಜಿ ಪಾರಾಗಿದ್ದಾರೆ.
ಸ್ವಾಮೀಜಿ ಪ್ರಯಾಣಿಸುತ್ತಿದ್ದ ವಾಹನ ರಾಣೇಬೆನ್ನೂರಿನಿಂದ ದಾವಣಗೆರೆಗೆ ಕಡೆಗೆ ಹೋಗುತ್ತಿತ್ತು. ಎದುರಿಗೆ ಬಂದ ಬೈಕ್ ಸವಾರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಸ್ವಾಮೀಜಿಯ ವಾಹನ ಚಾಲಕ ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ವಾಹನ ಕಿರು ಸೇತುವೆಯ ತಡೆಗೋಡೆಗೆ ಉಜ್ಜಿಕೊಂಡು ಹೋಗಿ ಜಖಂಗೊಂಡಿದೆ. ಬೈಕ್ ಪಕ್ಕದಲ್ಲಿ ಗುಂಡಿಗೆ ಬಿದ್ದಿದೆ.
ಘಟನೆಯಲ್ಲಿ ಸ್ವಾಮೀಜಿ ವಾಹನದಲ್ಲಿದ್ದ ವೀರಭದ್ರಪ್ಪ ಬಿ. ಬಾದಾಮಿ ಹಾಗೂ ಚಾಲಕ ಮಂಜುನಾಥ ಅವರು ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಾರೆ. ಅಪಘಾತದ ಸಂದರ್ಭ ಸ್ವಲ್ಪ ಆಘಾತಗೊಂಡ ಅವರನ್ನು ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ದಾಖಲಿಸಿ ಗ್ಲುಕೋಸ್ (ಡ್ರಿಪ್ಸ್) ನೀಡಲಾಯಿತು ಎಂದು ಪಂಚಮಸಾಲಿ ಸಮಾಜದ ವಕ್ತಾರ ಬಿ. ಲೋಕೇಶ್ ತಿಳಿಸಿದರು.
ಬೈಕ್ ಸವಾರ ಹಲಸಬಾಳು ಗ್ರಾಮದ ನಿವಾಸಿ ಎಂ. ನಾಗರಾಜ ಅವರ ಕಾಲಿನ ಮೂಳೆ ಮುರಿದಿದೆ ಎಂದು ಪಿಎಸ್ಐ ರಾಮಕುಮಾರ ಸುಣಗಾರ ತಿಳಿಸಿದರು. ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.