ಹುಣಸಗಿ: ತಾಲ್ಲೂಕಿನಲ್ಲಿ ಸಮರ್ಪಕವಾಗಿ ಗ್ರಾಮೀಣ ಉದ್ಯೋಗ ಖಾತ್ರಿಯೋಜನೆ ಜಾರಿಯಾಗದೇ ಇದ್ದುದರಿಂದ ನಿತ್ಯ ನೂರಾರು ಜನರು ಗುಳೆ ಹೋಗುತ್ತಿದ್ದಾರೆ. ಗುಳೆ ಹೋದ ಕಾರ್ಮಿಕರೆ ಚಳ್ಳಕೆರೆ ಬಳಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆದ್ದರಿಂದ ಮೃತ ಕೂಲಿಕಾರ್ಮಿಕ ಕುಟುಂಬಕ್ಕೆ ತಲಾ ಐದು ಲಕ್ಷರೂ ಮತ್ತು ತೀವ್ರವಾಗಿ ಗಾಯಗೊಂಡಿರುವವರಿಗೆ ತಲಾ ಎರಡು ಲಕ್ಷರೂ ಪರಿಹಾರ ನೀಡಬೇಕೆಂದು ಜೆ.ಡಿ.ಎಸ್. ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಸತ್ ಹುಸೇನ ಆಗ್ರಹಿಸಿದ್ದಾರೆ.
ಮಂಗಳವಾರ ಸಮೀಪದ ಬೈಲಾಪುರತಾಂಡಾದ ಮೃತ ಅನುಸೂಬಾಯಿ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿ ನಂತರ ಮಾತನಾಡಿದರು. ಸುರಪುರ ತಾಲ್ಲೂಕಿನ ಬಹುತೇಕ ತಾಂಡಾಗಳಿಗೆ ನೀರಾವರಿ ಸೌಲಭ್ಯಗಳಿಲ್ಲದಿದ್ದರಿಂದ ಗುಳೆಹೋಗುವದು ಸಾಮನ್ಯವಾಗಿದೆ. ಈ ಗುಳೆ ತಪ್ಪಿಸಲು ಸಮರ್ಪಕವಾಗಿ ಸರ್ಕಾರಿ ಯೋಜನೆಗಳು ಜಾರಿಯಾಗಬೇಕು. ಬರ ಕಾಮಗಾರಿ ಆರಂಭಿಸಬೇಕೆಂದು ಒತ್ತಾಯಿಸಿದರು.
ಮೃತ ಕಾರ್ಮಿಕರ ಮನೆಗೆ ತಾಲ್ಲೂಕು ಅಧಿಕಾರಿಗಳು ಭೇಟಿ ನೀಡಿ ಸೌಲಭ್ಯಗಳನ್ನು ಒದಗಿಸಿಕೊಡ ಬೇಕೆಂದು ಆಗ್ರಹಿಸಿದ್ದಾರೆ. ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವೆಂಕಟೇಶ ಭಕ್ರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ರಾಠೋಡ ಇದ್ದರು
ಪರಿಹಾರ: ಮೃತ ಅನುಬಾಯಿ ಕುಟುಂಬಕ್ಕೆ ಹೆಬ್ಬಾಳ.ಬಿ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ರಾಠೋಡ ಮತ್ತು ಕಾರ್ಯದರ್ಶಿ 5000 ನಗದು ನೀಡಿ ಸಾಂತ್ವಾನ ಹೇಳಿದರು.