ತುಮಕೂರು: `ಮಾಧ್ಯಮಗಳು ಅತಿ ಹೆಚ್ಚು ಜಾಹೀರಾತು ಅವಲಂಬಿತವಾಗುತ್ತಿದ್ದು, ಜಾಹೀರಾತು ಇಲ್ಲದೆ ಪತ್ರಿಕೆ ಬದುಕಲು ಸಾಧ್ಯವಿಲ್ಲ ಎನ್ನುವಂತಾಗಿದೆ. ಜಾಹೀರಾತು ಅವಲಂಬನೆ ಮತ್ತು ಪ್ರಭಾವದಿಂದ ಹೊರಬರುವ ಬಗ್ಗೆ ಚರ್ಚೆ ನಡೆಯಬೇಕಿದೆ~ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಲಹೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂಘದ 65ನೇ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಾಧ್ಯಮಗಳು ಅಪರಾಧ ಸುದ್ದಿಗಳನ್ನು ವೈಭವೀಕರಿಸುತ್ತಿದ್ದು, ಅಪರಾಧಿಗಳನ್ನು ಹೀರೊಗಳಂತೆ ಪ್ರತಿಬಿಂಬಿಸುತ್ತಿವೆ. ಇದರಿಂದ ದುಷ್ಟಶಕ್ತಿಗಳು ವಿಜೃಂಭಿಸುವಂತಾಗಿದೆ.
ಎಲೆಕ್ಟ್ರಾನಿಕ್ ಮಾಧ್ಯಮಗಳ `ಬ್ರೇಕಿಂಗ್ ನ್ಯೂಸ್~ ಸ್ಪರ್ಧೆಯಿಂದ ಅವಘಡಗಳು ಸಂಭವಿಸುತ್ತಿವೆ. ಈ ಬಗ್ಗೆ ಮಾಧ್ಯಮಗಳು ಎಚ್ಚರಿಕೆ ವಹಿಸಬೇಕಾಗಿದೆ ಎಂದರು.
ಸದನದಲ್ಲಿ ಅಂಗಿ ಹರಿದುಕೊಂಡು ಕಿರುಚುವರು, ಪೇಪರ್ ಹರಿದು ಗಲಾಟೆ ಮಾಡುವರು, ವಿನಾಕಾರಣ ಗದ್ದಲ ಎಬ್ಬಿಸುವವರ ಬಗ್ಗೆ ಅತಿ ಹೆಚ್ಚು ಪ್ರಚಾರ ನೀಡಲಾಗುತ್ತಿದೆ. ಸದನದ ಉತ್ತಮ ಚರ್ಚೆಗಳ ಬಗ್ಗೆ ಗಮನಹರಿಸುತ್ತಿಲ್ಲ.
ಹೀಗಾಗಿ ಸದನದಲ್ಲಿ ಅನಗತ್ಯ ಗದ್ದಲಕ್ಕೆ ಕಾರಣವಾಗುತ್ತಿದೆ ಎಂದು ಅವರು ಟೀಕಿಸಿದರು. ಮಾಧ್ಯಮಗಳ ರಚನಾತ್ಮಕ ಟೀಕೆ, ಟಿಪ್ಪಣಿಗಳನ್ನು ಸರ್ಕಾರ ಸಕಾರಾತ್ಮಕವಾಗಿ ಸ್ವೀಕರಿಸುತ್ತದೆ. ಸರ್ಕಾರ ಎಚ್ಚರಿಕೆಯಿಂದ ನಡೆಯಲು ಮಾಧ್ಯಮಗಳ ಮಾರ್ಗದರ್ಶನ, ಸಲಹೆ ಅಗತ್ಯ. ಮಾಧ್ಯಮಗಳು ಸಮಾಜನ ಕನ್ನಡಿಯಾಗಿ ಕೆಲಸ ಮಾಡಬೇಕು ಎಂದೂ ಸಲಹೆ ನೀಡಿದರು.