ಬೆಂಗಳೂರು: ಅಬುಧಾಬಿಯಲ್ಲಿ ಡಿಸೆಂಬರ್ 14 ಮತ್ತು 15 ರಂದು 9ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ನಡೆಯಲಿದೆ ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಪಿ.ಮಂಜುನಾಥ್ ಸಾಗರ್ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, `ಮಂಗಳೂರಿನ ಹೃದಯವಾಹಿನಿ ಬಳಗ ಹಾಗೂ ಅಬುಧಾಬಿ ಕರ್ನಾಟಕ ಸಂಘವು ಸಂಯುಕ್ತವಾಗಿ ಸಮ್ಮೇಳನವನ್ನು ಆಯೋಜಿಸಿದ್ದು, ಅಬುಧಾಬಿಯ ಇಂಡಿಯನ್ ಸ್ಕೂಲ್ನ ಶೇಖ್ ಜಾಯೇದ್ ಸಭಾಂಗಣದಲ್ಲಿ ಸಮ್ಮೇಳನ ನಡೆಯಲಿದೆ~ ಎಂದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಸಂಸ್ಕೃತ ವಿ.ವಿ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ವಹಿಸಲಿದ್ದು, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಉದ್ಘಾಟಿಸುವರು. ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮತ್ತು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಆಗಮಿಸುವರು ಎಂದರು.
ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ಡಾ.ಕೆ.ಬಿ.ನಾಗೂರ್, ಸ್ವಾಗತ ಸಮಿತಿಯ ಮಹಾಪೋಷಕ ಡಾ.ಬಿ.ಆರ್.ಶೆಟ್ಟಿ, ಸಲಹಾ ಸಮಿತಿ ನಿರ್ದೇಶಕ ಡಿ.ಎಸ್.ವೀರಯ್ಯ ಮತ್ತಿತರರು ಉಪಸ್ಥಿತರಿದ್ದರು.