ಯಲಹಂಕ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಯೋಜನಾ ವಿಭಾಗದ ಮುಂದುವರಿದ ಕಾಮಗಾರಿಗಳ ಅನುದಾನದಡಿ ರೂ 5 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್.ಆರ್.ವಿಶ್ವನಾಥ್ ಕೋಗಿಲು ಮುಖ್ಯರಸ್ತೆಯಲ್ಲಿ ಚಾಲನೆ ನೀಡಿದರು.
ವಾರ್ಡ್ ಸಂಖ್ಯೆ-1ರ ವ್ಯಾಪ್ತಿಯ ಕೋಗಿಲು ಮುಖ್ಯರಸ್ತೆಯಲ್ಲಿ ರೂ 56 ಲಕ್ಷ ವೆಚ್ಚದಲ್ಲಿ ಪಾದಚಾರಿ ರಸ್ತೆ ಅಭಿವೃದ್ಧಿ, ಮಾರುತಿ ನಗರದಲ್ಲಿ ರೂ 99 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ರೂ 2.50 ಕೋಟಿ ವೆಚ್ಚದಲ್ಲಿ ನಿಟ್ಟೆ ಕಾಲೇಜು ರಸ್ತೆ ಅಭಿವೃದ್ಧಿ, ವಾರ್ಡ್ ಸಂಖ್ಯೆ-3ರ ವ್ಯಾಪ್ತಿಯ ಉಪನಗರ 4ನೇ ಹಂತದ ಶಿರ್ಕೆ ಬಹುಮಹಡಿ ಕಟ್ಟಡಗಳ ಪ್ರದೇಶದಲ್ಲಿ ರೂ 95 ಲಕ್ಷ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿ, ವಾರ್ಡ್ ಸಂಖ್ಯೆ-4ರ ವ್ಯಾಪ್ತಿಯ ಅಳ್ಳಾಳಸಂದ್ರದಲ್ಲಿ ಬೃಹತ್ ನೀರುಗಾಲುವೆಗೆ ತಡೆಗೋಡೆ ನಿರ್ಮಿಸುವ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು. ಬಿಬಿಎಂಪಿ ಸದಸ್ಯರಾದ ಡಾ.ಗೀತಾಶಶಿಕುಮಾರ್, ಎಂ.ಮುನಿರಾಜು, ವೈ.ಎನ್.ಅಶ್ವತ್ಥ್, ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಹ್ಲಾದ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ಆಂಜಿನಪ್ಪ ಇದ್ದರು.