ಕೆ.ಆರ್.ನಗರ: ಜೆಡಿಎಸ್ ಅಭ್ಯರ್ಥಿ ಸಾ.ರಾ.ಮಹೇಶ್ ತಾಲ್ಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿರುವುದಾಗಿ ಹೇಳುತ್ತಾರೆ. ಸಾಕಷ್ಟು ಅಭಿವೃದ್ಧಿ ಮಾಡಿದವರು ಕ್ಷೇತ್ರದಲ್ಲಿ ಹಣ, ಸೀರೆ ಹಂಚುತ್ತಿರುವುದೇಕೆ ಎಂದು ಸಂಸದ ಅಡಗೂರು ಎಚ್.ವಿಶ್ವನಾಥ್ ಪ್ರಶ್ನಿಸಿದರು.
ಪಟ್ಟಣದ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಾ.ರಾ.ಮಹೇಶ್ ಅವರು ಕ್ಷೇತ್ರದಲ್ಲಿ ನಿಜವಾಗಿ ಸಮಗ್ರ ಅಭಿವೃದ್ಧಿ ಮಾಡಿದ್ದರೆ ಕ್ಷೇತ್ರದಲ್ಲಿ ಅಕ್ಕಿ, ಬಟ್ಟೆ, ಹೆಂಡ, ಮೂಗುತಿ, ಹಂಚಬೇಕಿತ್ತೆ? ಎಂದು ಪ್ರಶ್ನಿಸಿದ ಅವರು, ಅವರೊಬ್ಬ ಶಾಸಕರಾಗಿ ತಾಲ್ಲೂಕಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಾಲೆಗಳ ಆಧುನೀಕರಣ ಕಾಮಗಾರಿಯಲ್ಲಿ ಗುತ್ತಿಗೆದಾರರಿಂದ ಎಷ್ಟು ಕಿಕ್ಬ್ಯಾಕ್ ಪಡೆದಿದ್ದೀರಿ ಎಂದು ಪ್ರಶ್ನಿಸಿದ ಅವರು, ಗುತ್ತಿಗೆದಾರರೊಂದಿಗೆ ಸೇರಿಕೊಂಡು ಕಳಪೆ ಕಾಮಗಾರಿ ನಡೆಸಿ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ರಿಜ್ವಾನ್ ಹರ್ಷದ್ ಮಾತನಾಡಿದರು. ಕಾಂಗ್ರೆಸ್ ನಾಯಕಿ ಅನುರಾಧ ಮಹದೇವ್, ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ವಿ.ದೇವರಹಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ರವಿಶಂಕರ್, ಮುಖಂಡರಾದ ಸಿ.ಪಿ.ರಮೇಶ್, ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ರಮೀಜ್ ಉಲ್ಲಾಖಾನ್, ಜಿಲ್ಲಾ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಎಸ್.ಸಿದ್ದೇಗೌಡ, ಪುರಸಭೆ ಸದಸ್ಯರಾದ ರಿಜ್ವಾನ್ ಉಲ್ಲಾಖಾನ್, ಸುಬ್ರಹ್ಮಣ್ಯ, ನಟರಾಜ್, ವಕ್ತಾರ ಜಾಬೀರ್, ಎಪಿಎಂಸಿ ಮಾಜಿ ನಿರ್ದೇಶಕ ರಾಜಶೇಖರ್, ವೇಣುಗೋಪಾಲ್, ವಿನಯ್, ಡೈರಿ ಭದ್ರಿ ಇದ್ದರು.