ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ: ವಿದ್ಯಾರ್ಥಿಗಳ ಪಾತ್ರ ಗಮನಾರ್ಹ

Last Updated 31 ಮಾರ್ಚ್ 2011, 19:00 IST
ಅಕ್ಷರ ಗಾತ್ರ

ಬೆಂಗಳೂರು:   ‘2020ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಗೆ ಸೇರಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಗಮನಾರ್ಹ’ ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಹೇಳಿದರು.

ಮೈಸೂರು ಮಹಾರಾಜ ಉನ್ನತ ಶಿಕ್ಷಣ ಸಂಸ್ಥೆಯ ಜೆಮ್ಸ್ ಬಿ ಸ್ಕೂಲ್‌ನ ಪದವಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರಸ್ತುತ ಭಾರತವು ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಮುಂದಿನ ಒಂಬತ್ತು ವರ್ಷಗಳಲ್ಲಿ ಮುಂದುವರೆದ ರಾಷ್ಟ್ರವಾಗಿ ರೂಪುಗೊಳ್ಳಲಿದೆ. ಈ ಮಹಾನ್ ಸಾಧನೆಯ ಹಾದಿಯಲ್ಲಿ ವಿದ್ಯಾರ್ಥಿಗಳ ಪಾತ್ರ ದೊಡ್ಡದು ಎಂದು ತಿಳಿಸಿದರು.

2020ರ ವೇಳೆಗೆ ನಗರ ಹಾಗೂ ಗ್ರಾಮೀಣ ಪ್ರದೇಶಗಳ ನಡುವಿನ ಅಂತರವು ಬಹುಮಟ್ಟಿಗೆ ತಗ್ಗಲಿದೆ. ಬಡತನ ನಿರ್ಮೂಲನೆ, ಉತ್ತಮ ಆರೋಗ್ಯ ಸೇವೆಗಳು, ಸಮರ್ಪಕ ನೀರು ಪೂರೈಕೆ, ಉದ್ಯೋಗ ಸೇರಿದಂತೆ ಎಲ್ಲ ಮೂಲಸೌಕರ್ಯಗಳು ದೊರೆಯಲಿವೆ. ವಿಶ್ವದಲ್ಲಿಯೇ ವಾಸಕ್ಕೆ ಯೋಗ್ಯವಾದ ಸ್ಥಳ ಎನ್ನುವ ಹೆಗ್ಗಳಿಕೆ ಭಾರತ ದಕ್ಕಲಿದೆ ಎಂದು ಅವರು ನುಡಿದರು.

ಕೃಷಿ, ವಿದ್ಯುತ್, ಸಂವಹನ, ಮಾಹಿತ-ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿವೆ. ಇವುಗಳನ್ನು ಬಳಸಿಕೊಳ್ಳಬೇಕು. ಮುಂದಿನ ಜನಾಂಗವು ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಕೆಲಸಗಳನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಅವರು ಕರೆ ನೀಡಿದರು.

ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ‘ಮನುಷ್ಯರು ಉತ್ತಮ ರೀತಿಯಲ್ಲಿ ಬದುಕಬೇಕಾದರೆ ಧರ್ಮ ಅನಿವಾರ್ಯ. ಪ್ರತಿ ಧರ್ಮಗಳಲ್ಲೂ ಉತ್ತಮ ಅಂಶಗಳಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಜನರು ಶಾಂತಿಯುತ ಹಾಗೂ ಸಂತೋಷವಾಗಿ ಬದುಕಲು ಸಾಧ್ಯ’ ಎಂದು ಹೇಳಿದರು.
‘ಧರ್ಮ ಹಾಗೂ ದೇವರ ಭಯ ಇಲ್ಲದಿದ್ದರೆ ಅಪರಾಧ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗುತ್ತಿದ್ದವು. ಪೊಲೀಸ್ ಠಾಣೆ ಹಾಗೂ ನ್ಯಾಯಾಲಯಗಳ ಅವಶ್ಯಕತೆ ಹೆಚ್ಚಾಗಿರುತ್ತಿತ್ತು’ ಎಂದು ಅವರು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಧಾನ ಪೋಷಕ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮಾತನಾಡಿ, ಕಲಿಕೆ-ಗಳಿಕೆ-ಕೆಲಸ ತತ್ವದ ಆಧಾರದ ಮೇಲೆ ಈ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಅದರಂತೆ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಈಗ ಹಲವಾರು ಉದ್ಯೋಗಾವಕಾಶಗಳಿದ್ದು, ಇವುಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳ   ಬೇಕು’ ಎಂದರು.

‘ಈ ವರ್ಷದಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಇದರ ಜೊತೆಗೆ ‘ಹೆರಿಟೇಜ್ ಟೂರಿಸಂ ಹಾಸ್ಪಿಟ್ಯಾಲಿಟಿ’ ವಿಷಯದಲ್ಲಿ ಎಂಬಿಎ ಕೋರ್ಸ್ ಆರಂಭಿಸುವ ಯೋಚನೆಯೂ ಇದೆ’ ಎಂದು ಅವರು ತಿಳಿ ಸಿದರು.

ಜೆಮ್ಸ್ ಬಿ ಸ್ಕೂಲ್‌ನ ಡೀನ್ ಡಾ.ಎಂ.ಐ.ಎಂ. ನೆಹರೂಜಿ, ಸ್ಕೂಲ್‌ನ ಶೈಕ್ಷಣಿಕ ಸಲಹೆಗಾರ ಪ್ರೊ.ಚಂಬಿ ಪುರಾಣಿಕ್ ಹಾಗೂ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT