ಅಂಕೋಲಾ: ಭಾರತವು ಅಪೂರ್ವ ಜೀವ ವೈವಿಧ್ಯಗಳ ತಾಣವಾಗಿದ್ದು, ಅವುಗಳ ಆವಾಸ ಸ್ಥಾನಗಳಲ್ಲಿನ ಮಾನವನ ಹಸ್ತಕ್ಷೇಪದಿಂದಾಗಿ ಜೀವ ಸಂಕುಲವು ಅಪಾಯದಲ್ಲಿದೆ. ಅಭಿವೃದ್ಧಿಯ ಹೆಸರಿನಲ್ಲಿ ಕೃಷಿ ಜಮೀನು, ಹುಲ್ಲುಗಾವಲುಗಳನ್ನು ಅತಿಕ್ರಮಿಸಿಕೊಂಡು ಅನಾಹುತಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ ಎಸ್. ಹೊನ್ನಪ್ಪಗೋಳ ಕಳವಳ ವ್ಯಕ್ತಪಡಿಸಿದರು.
ಸೋಮವಾರ ಅಂಕೋಲಾದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಬೀದರ್ ವಿಶ್ವವಿದ್ಯಾಲಯ, ಸ್ಥಳೀಯ ಕಡಲ ಮೀನುಗಾರಿಕೆ ಸಂಶೋಧನೆ ಹಾಗೂ ಮಾಹಿತಿ ಕೇಂದ್ರ, ಪಟ್ಟಣ ಪಂಚಾಯಿತಿ ಮತ್ತು ಮಂಗಳೂರಿನ ಅಸೋಸಿಯೇಶನ್ ಆಫ್ ಬ್ರಿಟಿಷ್ ಸ್ಕಾಲರ್ಸ್ ವತಿಯಿಂದ ಆಯೋಜಿಸಲಾದ ‘ಜಾಗತಿಕ ತಾಪಮಾನ ಏರಿಕೆ ಮತ್ತು ವಾತಾವರಣ, ಮೀನುಗಾರಿಕೆ ಮೇಲೆ ಉಂಟಾಗುವ ಪರಿಣಾಮಗಳು’ ವಿಷಯ ಕುರಿತ ಎರಡು ದಿನಗಳ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅನ್ನ ನೀಡುವ ರೈತರು, ಮೀನುಗಾರರು ತೊಂದರೆಗೊಳಗಾಗಿದ್ದು ಏರುತ್ತಿರುವ ಜನಸಂಖ್ಯೆಗೆ ಪೌಷ್ಟಿಕ ಆಹಾರ ಪೂರೈಸುವ ಸಾಮರ್ಥ್ಯವನ್ನು ಅವರು ಕಳೆದುಕೊಳ್ಳುವಂತೆ ಮಾಡಲಾಗುತ್ತಿದೆ ಎಂದು ವಿವರಿಸಿದರು.ತಹಸೀಲ್ದಾರ ಡಾ.ಉದಯಕುಮಾರ ಶೆಟ್ಟಿ ‘ಪರಿಸರ ನಾಶ ತಡೆಯಲು ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನಿಸುವುದು ಅಗತ್ಯವಿದೆ’ ಎಂದರು.
ಸಹಕಾರಿ ಧುರೀಣ ಆರ್.ಎನ್. ನಾಯಕ ‘ಪರಿಸರ ನಾಶಕ್ಕೆ ಸರ್ಕಾರದ ಮತ್ತು ಅಧಿಕಾರಿಗಳ ತಪ್ಪು ನೀತಿ ಕಾರ್ಯಕ್ರಮಗಳು ಕಾರಣವಾಗಿವೆ’ ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಜಿ. ನಾಯಕ ಸಾಂದರ್ಭಿಕವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ.ಪಂ. ಅಧ್ಯಕ್ಷ ಭಾಸ್ಕರ್ ನಾರ್ವೇಕರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಪರಿಸರ ರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದರು.
ವಿ.ಕೆ. ಗರ್ಲ್ಸ್ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಡಲ ಮೀನುಗಾರಿಕಾ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಎಚ್.ಎಂ. ಶಿವಪ್ರಕಾಶ ಸ್ವಾಗತಿಸಿದರು. ಡಾ. ಮಂಜಪ್ಪ ನಿರೂಪಿಸಿದರು. ರಂಗಣ್ಣ ವಂದಿಸಿದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.