ನಾಯಕನಹಟ್ಟಿ: ಅಭಿವೃದ್ಧಿ ಹೊಂದುವವರನ್ನು ಕಂಡು ಪ್ರೋತ್ಸಾಹಿಸಿರಿ. ಕಾಲೆಳೆಯುವ ಕೆಲಸವನ್ನು ಮಾಡಬೇಡಿ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಸಲಹೆ ನೀಡಿದರು.
ಸಮೀಪದ ಜಾಗನೂರಹಟ್ಟಿಯಲ್ಲಿ ಭಾನುವಾರ ಭಾರತೀಯ ಜೀವ ವಿಮಾ ನಿಗಮ ಏರ್ಪಡಿಸಿದ್ದ ವಿಮಾ ಗ್ರಾಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದ ಇತಿಹಾಸದಲ್ಲಿ ಪಾಳೇಗಾರರು ತಮ್ಮದೇ ಛಾಪು ಮೂಡಿಸಿದ್ದಾರೆ. ಅಲ್ಲದೇ, ಇತಿಹಾಸ ನಿರ್ಮಾಣ ಮಾಡುವಲ್ಲಿ ನಾಯಕ ಜನಾಂಗದ ಕೊಡುಗೆ ಅಪಾರ ಎಂದು ತಿಳಿಸಿದರು.
ರಾಜ್ಯದಲ್ಲಿ 37 ಸಾವಿರ ಕೆರೆಗಳಿದ್ದು, ಅವುಗಳಲ್ಲಿ 32 ಸಾವಿರ ಕೆರೆಗಳನ್ನು ಪಾಳೇಗಾರರು ನಿರ್ಮಿಸಿ ಕೃಷಿಗೆ ದೊಡ್ಡ ಕಾಣಿಕೆ ನೀಡಿದ್ದಾರೆ. ಗ್ರಾಮೀಣ ಭಾಗದಲ್ಲಿ ವಿಮೆಯನ್ನು ಮಾಡಿಸಿ ಮುಂದಿನ ಭವಿಷ್ಯವನ್ನು ಹಸನು ಮಾಡಿಕೊಳ್ಳಿರಿ.
ಇದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಹಾಯವಾಗುತ್ತದೆ. ಸಬಲರು ದುರ್ಬಲರನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಆರ್ಥಿಕ ಸಂಕಷ್ಟ ನಿವಾರಣೆಯಾಗುತ್ತದೆ. ಭಾರತೀಯ ಜೀವವಿಮಾ ನಿಗಮ ಇಂತಹ ಕುಗ್ರಾಮದಲ್ಲಿ ಮಾಡಿರುವ ಸೇವೆ ಮೆಚ್ಚುವಂತದ್ದು ಎಂದು ಸ್ವಾಮೀಜಿ ಶ್ಲಾಘಿಸಿದರು.
ಎಲ್ಐಸಿಯ ಶಿವಮೊಗ್ಗ ಶಾಖೆ ಮಾರುಕಟ್ಟೆ ವಿಭಾಗದ ಪ್ರಕಾಶ್ ಮಾತನಾಡಿ, ಭಾರತೀಯ ಜೀವ ವಿಮಾ ನಿಗಮವು 64 ವರ್ಷದ ಹಿಂದೆ ್ಙ 5 ಕೋಟಿಯಿಂದ ಆರಂಭಿಸಿ, ಇಂದು ್ಙ 13 ಲಕ್ಷ ಕೋಟಿಯಷ್ಟು ವ್ಯವಹಾರ ಮಾಡುತ್ತಿದೆ ಎಂದರು.
ಎಲ್ಐಸಿ ಚಳ್ಳಕೆರೆ ಶಾಖೆ ಅಭಿವೃದ್ಧಿ ಅಧಿಕಾರಿ ತಿಪ್ಪೇಸ್ವಾಮಿ ವಿಮಾ ಗ್ರಾಮದ ಪರಿಕಲ್ಪನೆ ವಿವರಿಸಿದರು.
ಇದೇ ಸಂದರ್ಭದದಲ್ಲಿ 25 ಸಾವಿರ ಪ್ರೋತ್ಸಾಹ ಧನದ ಚೆಕ್ ಅನ್ನು ಚಳ್ಳಕೆರೆ ಶಾಖೆಯ ಶಾಖಾಧಿಕಾರಿ ಗಡ್ಕರ್ ಗ್ರಾಮ ಪಂಚಾಯ್ತಿ ಅಧ್ಯಕ್ಷ ತಿಪ್ಪೇಸ್ವಾಮಿ ಅವರಿಗೆ ನೀಡಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಜಿ.ಎಂ. ತಿಪ್ಪೇಸ್ವಾಮಿ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಓಬಯ್ಯ ಮಾತನಾಡಿದರು. ಕೆಪಿಸಿಸಿ ಸದಸ್ಯ ಬಾಲರಾಜ್, ತಾಲ್ಲೂಕು ಪಂಚಾಯ್ತಿ ಸದಸ್ಯ ಬಸವರಾಜ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಪಾಲಾಕ್ಷ, ಗ್ರಾಮ ಪಂಚಾಯ್ತಿ ಸದಸ್ಯರು, ಸಮಾಜದ ಮುಖಂಡರು, ಜನಪ್ರತಿನಿಧಿಗಳು ಹಾಜರಿದ್ದರು.