ಬೆಂಗಳೂರು: `ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿರುವ ಢುಂಢಿ ಕೃತಿಯನ್ನು ಮಾತ್ರವಲ್ಲ ಅದರ ಪರವಾಗಿ ಮಾತನಾಡುವವರನ್ನು ಕೂಡ ವಿರೋಧಿಸಬೇಕಿದೆ' ಎಂದು ಹಿರಿಯ ಸಂಶೋಧಕ ಡಾ.ಚಿದಾನಂದ ಮೂರ್ತಿ ಕರೆ ನೀಡಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಭೌತಿಕ ಭಕ್ತಿಯಂತೆ, ಭಾವನಾತ್ಮಕ ಭಕ್ತಿಯೂ ಮುಖ್ಯ. ಇದನ್ನು ಅವಮಾನಿಸುವವರು ಮೂರ್ಖರಾಗುತ್ತಾರೆ ವಿನಃ ವಿರೋಧಿಸುವವರಲ್ಲ' ಎಂದು ತಿರುಗೇಟು ನೀಡಿದರು.
`ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಧಾರ್ಮಿಕ ಮಹಾಪುರುಷರ ಬಗ್ಗೆ ಅವಹೇಳನ ಮಾಡಿ ಬರೆಯುವ ಪ್ರವೃತ್ತಿಗೆ ಕಡಿವಾಣ ಹಾಕುವ ಅಗತ್ಯವಿದೆ. ಅನ್ಯಧರ್ಮದ ಧಾರ್ಮಿಕ ನಂಬಿಕೆಗಳನ್ನು ಲೇವಡಿ ಮಾಡಿದ್ದರೆ, ಇಡೀ ದೇಶವೇ ಹೊತ್ತಿ ಉರಿಯುತ್ತಿತ್ತು. ಸಹಿಷ್ಣುತೆ ಹಿಂದೂ ಧರ್ಮದ ಜೀವಾಳ. ಹಾಗೆಂದು ಹಿಂದೂಗಳು ಹೇಡಿಗಳಲ್ಲ' ಎಂದರು.
`ಢುಂಢಿ ಕೃತಿಯನ್ನು ಪ್ರಜ್ಞಾವಂತರು ವಿರೋಧಿಸಬೇಕು. ಪ್ರಗತಿಪರರು, ಜಾತ್ಯತೀತ ಸೋಗಿನಲ್ಲಿರುವವರ ನಿಜ ಬಣ್ಣವನ್ನು ಜನತೆ ಅರ್ಥಮಾಡಿಕೊಳ್ಳಬೇಕು. ಕೃತಿಗೆ ಹೇರಿರುವ ನಿಷೇಧ ಹೀಗೆ ಮುಂದುವರಿಯಲಿ, ಪ್ರಗತಿಪರರ ಒತ್ತಾಯಕ್ಕೆ ಮಣಿದು ಕೃತಿಯ ಮಾರಾಟಕ್ಕೆ ಅವಕಾಶ ದೊರೆತರೆ ಉಗ್ರ ಪ್ರತಿಭಟನೆ ಮಾಡಲಾಗುವುದು' ಎಂದು ಎಚ್ಚರಿಕೆ ನೀಡಿದರು.
`ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡಿರುವ ಯೋಗೇಶ್ ಮಾಸ್ಟರ್ ಅವರು ಕೂಡಲೇ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಯಾರಿಂದಲೂ ವ್ಯಕ್ತಿ ಸ್ವಾತಂತ್ರ್ಯದ ಕುರಿತು ಪಾಠ ಕಲಿಯುವ ಅಗತ್ಯವಿಲ್ಲ. ಸಾರ್ವಜನಿಕರು ಸಿಡಿದೆದ್ದಾಗ ಮಾತ್ರ ಇಂತಹ ಕೃತಿಗಳು ಪ್ರಕಟವಾಗುವುದಿಲ್ಲ' ಎಂದರು.