ಧಾರವಾಡ: `ಅಮೆರಿಕದ 10 ಪ್ರಮುಖ ಕಂಪೆನಿಗಳ ಕೈಯಲ್ಲಿ ವಿಶ್ವದ ಶೇ 50ರಷ್ಟು ಬೀಜಗಳು ಶೇಖರಣೆಯಾಗಿದ್ದು, ಆ ಕಂಪೆನಿಗಳು ಬೀಜಗಳನ್ನು ಪೂರೈಸುವುದಿಲ್ಲ ಎಂದು ಹೇಳಿದರೆ ವಿಶ್ವದ ಅರ್ಧದಷ್ಟು ಜನಸಂಖ್ಯೆ ಹಸಿವಿನಿಂದ ಸಾಯಬೇಕಾಗುತ್ತದೆ. ಇದು ಅಮೆರಿಕ ಸೃಷ್ಟಿಸಿದ ಆಹಾರದ ರಾಜಕೀಯ~ ಎಂದು ಹೈದರಾಬಾದ್ನ ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿ ನಿರ್ದೇಶಕ ಪಿ.ವಿ.ಸತೀಶ ಎಚ್ಚರಿಸಿದರು.
ನಗರದ ಸೆಂಟರ್ ಫಾರ್ ಡೆವಲಪ್ಮೆಂಟಲ್ ಸ್ಟಡೀಸ್ ಸಂಸ್ಥೆ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ `ಆಹಾರದ ರಾಜಕೀಯ~ ಕುರಿತು ಉಪನ್ಯಾಸ ನೀಡಿದ ಅವರು, `ಅಮೆರಿಕ ಸರ್ಕಾರದ ಕಾರ್ಯದರ್ಶಿಯಾಗಿದ್ದ ಹೆನ್ರಿ ಕಿಸ್ಸಿಂಜರ್ ಎಂಬಾತ, `ತೈಲದ ಮೇಲೆ ನಿಯಂತ್ರಣ ಸಾಧಿಸುವುದರಿಂದ ಜಗತ್ತಿನ ಕೆಲ ದೇಶಗಳನ್ನು ಮಾತ್ರ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಆದರೆ ಆಹಾರದ ಮೇಲೆ ನಿಯಂತ್ರಣ ಹೊಂದುವುದರಿಂದ ಇಡೀ ಜಗತ್ತನ್ನೇ ಮುಷ್ಟಿಯಲ್ಲಿಟ್ಟುಕೊಳ್ಳಬಹುದು~ ಎಂದು ಹೇಳಿಕೆ ನೀಡಿದ್ದ.
ಆತನ ಹೇಳಿಕೆಯಂತೆಯೇ ಅಮೆರಿಕದ ಮಾನ್ಸಾಂಟೊ ಕಂಪೆನಿಯ ಜಗತ್ತಿನ ಹಲವು ರಾಷ್ಟ್ರಗಳಿಗೆ ಬೀಜ ಪೂರೈಸುವ ಬೃಹತ್ ಕಂಪೆನಿಯಾಗಿದೆ. ಭಾರತದ ಸುಮಾರು 200 ಸಣ್ಣ ಬೀಜ ಕಂಪೆನಿಗಳನ್ನು ಆಪೋಶನ ತೆಗೆದುಕೊಂಡು ದೈತ್ಯವಾಗಿ ಬೆಳೆದಿದೆ. ಉತ್ಕೃಷ್ಟ ಬೀಜಗಳನ್ನು ತಯಾರಿಸುತ್ತಿದ್ದ ಮಹಿಕೊ ಇಂಡಿಯಾ ಕಂಪೆನಿಯ ಷೇರುಗಳನ್ನು ಖರೀದಿಸುವ ಮೂಲಕ ಬೀಜ ಉತ್ಪಾದನೆಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ~ ಎಂದರು.
ಹಸಿರು ಕ್ರಾಂತಿಯ ಸಂದರ್ಭದಲ್ಲಿ ಅಮೆರಿಕ ಮೂಲದ ವಿಜ್ಞಾನಿಯೊಬ್ಬರಿಗೆ ಉತ್ಪಾದನೆ ಹೆಚ್ಚಳ ಮಾಡಲು ಅನುಮತಿ ನೀಡಿದ ಕ್ರಮವನ್ನೂ ಪರೋಕ್ಷವಾಗಿ ಟೀಕಿಸಿದ ಸತೀಶ, `ಇಂದು ಆಹಾರದ ಉತ್ಪಾದನೆ ನಾಲ್ಕು ಪಟ್ಟು ಹೆಚ್ಚಾಗಿದೆ. ಆದರೆ ಅದೇ ವೇಳೆಗೆ ರಸಗೊಬ್ಬರ, ಕೀಟನಾಶಕಗಳ ಬಳಕೆ ಪ್ರಮಾಣವೂ ಹೆಚ್ಚಿದೆ. 1950ರಲ್ಲಿ 65 ಸಾವಿರ ಟನ್ ರಸಗೊಬ್ಬರವನ್ನು ಬಳಕೆ ಮಾಡಲಾಗುತ್ತಿತ್ತು.
ಆದರೆ ಇದೀಗ 11,281 ಲಕ್ಷ ಟನ್ ರಸಗೊಬ್ಬರವನ್ನು ಬಳಕೆ ಮಾಡಲಾಗುತ್ತಿದೆ. ಅಂದರೆ ಒಟ್ಟಾರೆ 20 ಸಾವಿರ ಪಟ್ಟು ರಸಗೊಬ್ಬರ ಬಳಕೆ ಮಾಡಿದಂತಾಗುತ್ತದೆ. ಉತ್ಪಾದನೆ ನಾಲ್ಕು ಪಟ್ಟು ಹೆಚ್ಚಾಗಿದೆ. ಆದರೆ ಇಷ್ಟೆಲ್ಲ ರಸಗೊಬ್ಬರ ಬಳಕೆ ಮಾಡಿ ಯಾವ ಹಸಿರು ಕ್ರಾಂತಿ ಸಾಧಿಸಿದಂತಾಯಿತು ಎಂಬುದು ಪ್ರಶ್ನೆಯಾಗುತ್ತದೆ~ ಎಂದು ಹೇಳಿದರು.
ಆಹಾರದ ರಾಜಕೀಯದ ಪರಿಣಾಮ ಅತಿ ಹೆಚ್ಚು ಹಸಿವಿನಿಂದ ಬಳಲುತ್ತಿರುವ 82 ರಾಷ್ಟ್ರಗಳ ಪಟ್ಟಿಯಲ್ಲಿ 67ನೇ ಪಟ್ಟಿಯಲ್ಲಿದೆ. ಅಪೌಷ್ಟಿಕತೆ ಎದುರಿಸುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ 128ನೇ ಸ್ಥಾನದಲ್ಲಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.