ನವದೆಹಲಿ (ಪಿಟಿಐ): ಅರಣ್ಯ ಯೋಜನೆಯ ಕಾರ್ಯಕ್ರಮಗಳಿಗಾಗಿ ನಿಗದಿಪಡಿಸಿರುವ ಮೊತ್ತವನ್ನು ಕಡಿತಗೊಳಿಸದಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಮನವಿ ಮಾಡಿದೆ.
ರಾಜ್ಯ ಸರ್ಕಾರಗಳು ಅರಣ್ಯ ಬೆಳೆಸುವ ಯೋಜನೆಯನ್ನು ಬಿಟ್ಟು ಇತರ ಹಲವು ಕಾರ್ಯಕ್ರಮಗಳಿಗಾಗಿ `ಅರಣ್ಯ ಅಭಿವೃದ್ಧಿ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ~ದಿಂದ (ಸಿಎಎಂಪಿಎ) ಪದೇ ಪದೇ ಹಣ ಕೇಳುತ್ತಿದ್ದರಿಂದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲು ನಿರ್ಧರಿಸಿರುವುದಾಗಿ ಪರಿಸರ ಸಚಿವೆ ಜಯಂತಿ ನಟರಾಜನ್ ಹೇಳಿದ್ದಾರೆ.
ಬುಧವಾರ ನಡೆದ ಪ್ರಾಧಿಕಾರದ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನಟರಾಜನ್, ಸಿಎಎಂಪಿಎ ಮೊತ್ತದ ಮೇಲೆ ಕಣ್ಣಿಟ್ಟಿರುವ ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ರಾಜ್ಯದ ಪಾಲನ್ನು ಕಡಿತಗೊಳಿಸಿವೆ, ಇದು ಸರಿಯಲ್ಲ ಎಂದರು.
ಸಿಎಎಂಪಿಎಗೆ ಸೇರಿದ 25,000 ಕೋಟಿ ರೂಪಾಯಿ ದೇಶದ ವಿವಿಧ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಮೂಲಧನವಾಗಿದ್ದು, ಇದನ್ನು ಸುಪ್ರೀಂಕೋರ್ಟ್ ನಿಯಮಗಳಿಗೆ ಅನುಸಾರವಾಗಿ ಅರಣ್ಯ ಅಭಿವೃದ್ಧಿ, ವನ್ಯಜೀವಿ ಸಂರಕ್ಷಣೆ ಇತರ ಪರಿಸರ ಸಂಬಂಧಿ ಯೋಜನೆಗಳಿಗಾಗಿ ಬಳಸಿಕೊಳ್ಳಬಹುದಾಗಿದೆ.