ರಾಯಚೂರು: ಅರಳೆ ಹೊತ್ತು ಸಾಗುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಘಟನೆ ಭಾನುವಾರ ಸಂಜೆ ನಗರದ ಹೈದರಾಬಾದ್ ರಸ್ತೆಯಲ್ಲಿ ನಡೆದಿದೆ.
ನಂತರ ಉಳಿದ ಅರಳೆಯನ್ನು ಜಿನ್ನಿಂಗ್ ಆವರಣದಲ್ಲಿ ತಂದು ಹಾಕಿದ್ದಾಗ ಅಲ್ಲಿನ ಅರಳೆಗೆ ಬೆಂಕಿ ಹೊತ್ತಿಕೊಂಡಿತ್ತು. ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಿಸಿದರು. ಘಟನೆಯಲ್ಲಿ ಸುಮಾರು ಮೂರುವರೆ ಲಕ್ಷ ಮೊತ್ತದ ಅರಳೆ ಸುಟ್ಟಿದೆ ಎಂದು ಹೇಳಲಾಗಿದೆ. ಅರಳೆಯು ರಂಗನಾಥ ಕಾಟನ್ ಕಂಪನಿಗೆ ಸೇರಿದೆ. ಬೆಂಕಿ ಆಕಸ್ಮಿಕದಲ್ಲಿ ಸುಟ್ಟ ಲಾರಿ ಭಗವಾನ್ ಎಂಬುವವರದ್ದಾಗಿದೆ ಎಂದು ಅಗ್ನಿ ಶಾಮಕ ದಳದ ಅಧಿಕಾರಿ ಶಶಿಧರ ಪ್ರಜಾವಾಣಿಗೆ ತಿಳಿಸಿದ್ದಾರೆ. ಪ್ರಕರಣವನ್ನು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.