ಕೃಷ್ಣರಾಜಪೇಟೆ: ಹಿಂದುಳಿದ ವರ್ಗದವರಿಗೆ ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ದೊರಕಿಸಿಕೊಡುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದೆ ಎಂದು ಶಾಸಕ ಕೆ.ಸಿ. ನಾರಾಯಣಗೌಡ ಹೇಳಿದರು.
ಪಟ್ಟಣದಲ್ಲಿ ಡಿ. ದೇವರಾಜಅರಸು ಹಿಂದುಳಿದ ವರ್ಗಗಳ ವೇದಿಕೆಯ ತಾಲ್ಲೂಕು ಘಟಕದ ವತಿಯಿಂದ ಬುಧವಾರ ಏರ್ಪಡಿಸಿದ್ದ ಅರಸು ಅವರ 98ನೇ ಜನ್ಮದಿನೋತ್ಸವ ಮತ್ತು ತಾಲ್ಲೂಕು ಮಟ್ಟದ ಹಿಂದುಳಿದ ವರ್ಗಗಳ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾವೇಶ ಉದ್ಘಾಟಿಸಿ ಮಾತನಾಡಿದ ವಿಧಾನಸಭೆ ಮಾಜಿ ಸ್ಪೀಕರ್ ಕೃಷ್ಣ, ಡಿ. ದೇವರಾಜ ಅರಸು ರಾಜ್ಯ ಕಂಡ ಅಪರೂಪದ ನೇತಾರರಾಗಿದ್ದು, ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ತೀರಾ ಕೆಳಜಾತಿಯವರು ಎನಿಸಿಕೊಂಡವರಿಗೂ ರಾಜಕೀಯ ಅಧಿಕಾರ ದೊರೆಯುವಂತೆ ಮಾಡಿದರು. ಅವರ ಆಡಳಿತ ಎಲ್ಲರಿಗೂ ಮಾದರಿ ಎಂದರು.
ವಸತಿರಹಿತ ಹಿಂದುಳಿದ ವರ್ಗದವರಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ವಸತಿ ಸೌಲಭ್ಯ ಕಲ್ಪಿಸುವುದು. ಸೂಕ್ತ ಮೀಸಲಾತಿ ಒದಗಿಸುವ ಮೂಲಕ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಉತ್ತಮ ಅವಕಾಶ ಕಲ್ಪಿಸುವುದು. ಸಹಕಾರ ಕ್ಷೇತ್ರದಲ್ಲಿ ಹಿಂದುಳಿದ ವರ್ಗದವರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವುದು ಸೇರಿ ದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಿರ್ಣಯ ಕೈಗೊಳ್ಳ ಲಾಯಿತು. ಅರಸು ವೇದಿಕೆಯ ಜಿಲ್ಲಾಧ್ಯಕ್ಷ ಎಲ್. ಸಂದೇಶ್ ಪ್ರಾಸ್ತಾವಿಕ ನುಡಿಗಳಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಸ್. ಅಂಬರೀಶ್, ಮಾಜಿ ಸದಸ್ಯ ಬಿ. ನಾಗೇಂದ್ರಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ರಾಧಾಶ್ರೀ ನಾಗೇಶ್, ಪದ್ಮಾ ಶಿವಣ್ಣ, ಮಾಜಿ ಸದಸ್ಯ ಕೆ. ಶ್ರೀನಿವಾಸ್, ಅರಸು ವೇದಿಕೆ ತಾಲ್ಲೂಕು ಅಧ್ಯಕ್ಷ ಕೆ. ಮುರಳೀಧರ್ ಇತರರು ಹಾಜರಿದ್ದರು.
ಶೋಷಿತ ಸಮುದಾಯಗಳ ಸಮಾವೇಶ 19ರಂದು
ಮಂಡ್ಯ: ಶೋಷಿತ ಸಮುದಾಯಗಳ ಸಮಾವೇಶವನ್ನು ಸೆ. 19ರಂದು ಬೆಳಿಗ್ಗೆ 11ಕ್ಕೆ ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಏರ್ಪಡಿಸಲಾಗಿದೆ. ಕನಾರ್ಟಕ ದಲಿತ ಸಂಘರ್ಷ ಸಮಿತಿ ಮೈಸೂರು ವಿಭಾಗವು ಛತ್ರಪತಿ ಶಾಹು ಮಹಾರಾಜರ 139ನೇ ಹಾಗೂ ದೇವರಾಜ ಅರಸು ಅವರ 98ನೇ ಜಯಂತಿ ಪ್ರಯುಕ್ತ ಈ ಸಮಾವೇಶ ಆಯೋಜಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.