ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಧಾರವಾಡದ ದಿ. ಪಂ. ಅರ್ಜುನಸಾ ನಾಕೋಡ ಅವರದು ಬಹುದೊಡ್ಡ ಹೆಸರು. ಸಂಗೀತದ ಕಂಪನ್ನು ನಾಡಿನ ಉದ್ದಗಲಕ್ಕೂ ಪಸರಿಸಿದ ಈ ಮೇರು ಸಂಗೀತಗಾರರದ್ದು ಬಹುಮುಖ ಪ್ರತಿಭೆ, ಸಾಧನೆ. ಪೈಲ್ವಾನರಾಗಿ, ಕಂಪನಿಯ ಮಾಲೀಕರಾಗಿ, ಸಂಗೀತ ಶಾಲೆಯ ಪ್ರಾಚಾರ್ಯರಾಗಿ ತಮ್ಮ ಜೀವನದುದ್ದಕ್ಕೂ ಕಲೆಯನ್ನು ಪೋಷಿಸಿಕೊಂಡು ಬಂದ ಅವರು, ಇಡೀ ಕುಟುಂಬದವರನ್ನು ಸಂಗೀತ ಕಲಾವಿದರನ್ನಾಗಿ ರೂಪಿಸಿದ್ದಲ್ಲದೆ ಹಲವಾರು ಶಿಷ್ಯವರ್ಗವನ್ನೂ ಸಂಗೀತದಲ್ಲಿ ತೊಡಗುವಂತೆ ಮಾಡಿದ ಮಹಾನ್ ಗಾಯಕರಾಗಿದ್ದವರು.
ಗದುಗಿನಲ್ಲಿ ಜನಿಸಿ ಅಪೂರ್ವ ಸಂಗೀತ ಸಾಧನೆ ಮಾಡಿದ ಈ ಕಲಾವಿದನ ಸವಿನೆನಪಿಗಾಗಿ ಬೆಂಗಳೂರಿನ ರೇಣುಕಾ ಸಂಗೀತ ಸಭಾ ಪ್ರತಿವರ್ಷ ಅಹೋರಾತ್ರಿ ಸಂಗೀತೋತ್ಸವ ಸಂಭ್ರಮವನ್ನು ಹತ್ತು ವರ್ಷಗಳಿಂದ ಏರ್ಪಡಿಸುತ್ತಾ ಬಂದಿದೆ.
‘ರೇಣುಕಾ ಸಂಗೀತ ಸಭಾ ವತಿಯಿಂದ ಪ್ರತಿವರ್ಷವೂ ಅಹೋರಾತ್ರಿ ಸಂಗೀತೋತ್ಸವದಲ್ಲಿ ಹಿರಿಯ ಮತ್ತು ಯುವ ಕಲಾವಿದರಿಗೆ ಹಾಡಲು, ಹಿಂದುಸ್ತಾನಿ- ಕರ್ನಾಟಕ ಸಂಗೀತದ ಜುಗಲ್ಬಂದಿ ಏರ್ಪಡಿಸಿ ಒಂದೇ ವೇದಿಕೆಯಲ್ಲಿ ಎರಡೂ ಸಂಗೀತ ಶೈಲಿಯನ್ನು ಸವಿಯಲು ಅವಕಾಶ ಕಲ್ಪಿಸಲಾಗುತ್ತಿದೆ ಎನ್ನುತ್ತಾರೆ ಸಂಗೀತ ಸಭಾದ ಅಧ್ಯಕ್ಷ ಪಂ. ವಿಶ್ವನಾಥ ನಾಕೋಡ.
ಸಂಗೀತ ನಮನ
ರೇಣುಕಾ ಸಂಗೀತ ಸಭಾ: ಶನಿವಾರ ಪಂಡಿತ್ ಅರ್ಜುನಸಾ ನಾಕೋಡರಿಗೆ ಸಂಗೀತ ನಮನ. ಕಲಾವಿದರು: ರಾಜಶೇಖರ್ ಮನ್ಸೂರ, ಸುರೇಂದ್ರಸಾ ನಾಕೋಡ ಮತ್ತು ಪದ್ಮಾ ತಲ್ವಾಲ್ಕರ್ ಗಾಯನ. ಎಂ.ಎಸ್.ಶೀಲಾ ಮತ್ತು ಮೀತಾ ಪಂಡಿತ್ (ಗಾಯನ ಜುಗಲ್ಬಂದಿ), ಕಲಾ ರಾಮನಾಥ್ (ಪಿಟೀಲು), ಅಭಿಜಿತ್ ಬ್ಯಾನರ್ಜಿ (ತಬಲಾ ಸೋಲೋ). ಸಹಕಲಾವಿದರು: ವ್ಯಾಸಮೂರ್ತಿ ಕಟ್ಟಿ. ಡಾ. ರವೀಂದ್ರ ಕಾಟೋಟಿ, ಗೋಪಿನಾಥ ನಾಕೋಡ ಮತ್ತು ಸತೀಶ ಕೊಳ್ಳಿ (ಹಾರ್ಮೋನಿಯಂ), ವಿಶ್ವನಾಥ ಮತ್ತು ರಾಜೇಂದ್ರ ನಾಕೋಡ (ತಬಲಾ), ಸಿ.ಎನ್. ಚಂದ್ರಶೇಖರ್ (ಪಿಟೀಲು), ಆನೂರು ಅನಂತ ಕೃಷ್ಣ ಶರ್ಮಾ (ಮೃದಂಗ).
ಅತಿಥಿಗಳು: ಮನು ಬಳಿಗಾರ್, ಹರಿ ಖೋಡೆ. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ರಾತ್ರಿ 9 ಗಂಟೆಯ ನಂತರ. ಪ್ರವೇಶ ಉಚಿತ. ಮಾಹಿತಿಗೆ 2349 6424. g