ಉಡುಪಿ: ಮಲ್ಪೆ ಬಂದರಿನ ಹೊರಭಾಗದಲ್ಲಿ ಲಂಗರು ಹಾಕಿದ್ದ ಮೀನುಗಾರಿಕಾ ಬೋಟ್ ಅಲೆಯ ಅಬ್ಬರಕ್ಕೆ ಕಲ್ಲಿಗೆ ಡಿಕ್ಕಿ ಹೊಡೆದು ಹಾನಿಯಾಗಿರುವ ಘಟನೆ ಬುಧವಾರ ಸಂಭವಿಸಿದೆ.
ಡಾಬಾ ಕಲ್ಮಾಡಿ ಅವರಿಗೆ ಸೇರಿದ ವರ್ಣ ಚೇತನ ಬೋಟ್ ಹಾನಿಗೀಡಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಈ ಬೋಟ್ನಲ್ಲಿ ಇದ್ದ ಒಬ್ಬ ಕಾರ್ಮಿಕ ಈಜಿ ದಡ ಸೇರಿದ್ದು, ಸಣ್ಣ ಪುಟ್ಟ ಗಾಯಗೊಂಡಿದ್ದಾರೆ.
ಮಳೆ ಹಾಗೂ ಗಾಳಿಯ ಹಿನ್ನೆಲೆಯಲ್ಲಿ ಬುಧವಾರ ಮೀನುಗಾರಿಕೆಗೆ ತೆರಳದೆ ಬಂದರಿನಲ್ಲಿ ಎಲ್ಲಾ ಬೋಟ್ಗಳನ್ನು ನಿಲುಗಡೆ ಮಾಡಲಾಗಿತ್ತು. ಬಂದರಿನಲ್ಲಿ ಸ್ಥಳಾವಕಾಶದ ಕೊರತೆಯಿಂದ ಕೆಲವು ಬೋಟ್ಗಳನ್ನು ಹಗ್ಗದಲ್ಲಿ ಒಂದಕ್ಕೊಂದನ್ನು ಬಿಗಿದು ಹೊರಗಡೆ ನಿಲುಗಡೆ ಮಾಡಲಾಗಿತ್ತು.
ರಾತ್ರಿ ವೇಳೆ ಸಮುದ್ರದ ಅಲೆಗಳ ಅಬ್ಬರದಿಂದ ನಿಲುಗಡೆ ಮಾಡಿದ್ದ ಬೋಟ್ಗಳಲ್ಲಿ ಮೂರು ಬೋಟ್ಗಳು ಹಗ್ಗ ತುಂಡಾಗಿ ಸಮುದ್ರದ ಕಡೆ ಚಲಿಸಿದ್ದು, ಬೆಳಗಿನ ಜಾವ ಇದನ್ನು ಗಮನಿಸಿದ ಮೀನುಗಾರರು ಎರಡು ಬೋಟ್ಗಳನ್ನು ರಕ್ಷಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದರು.
ಆದರೆ ಡಾಬಾ ಕಲ್ಮಾಡಿ ಅವರಿಗೆ ಸೇರಿದ ವರ್ಣ ಚೇತನ ಬೋಟ್ ಅಳಿವೆಯಲ್ಲಿ ಕಲ್ಲಿಗೆ ಡಿಕ್ಕಿ ಹೊಡೆದು ಹಾನಿಗೊಂಡಿದೆ ಎಂದು ಮೀನುಗಾರರು ತಿಳಿಸಿದರು.