ಕೊಪ್ಪಳ: ತಾಲ್ಲೂಕಿನ ಅಳವಂಡಿ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ ಹುಚ್ಚು ನಾಯಿ ಕಡಿದ ಪರಿಣಾಮ 10ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ನಡೆದಿದೆ.
ಈ ಪೈಕಿ ಮಹಿಳೆಯೊಬ್ಬಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೇಸಿಗೆ ಹಿನ್ನೆಲೆಯಲ್ಲಿ ಮನೆಯಂಗಳದಲ್ಲಿ ಮಲಗಿದ್ದ ಕೆಲವರಿಗೆ ಕಡಿದಿರುವ ಹುಚ್ಚು ನಾಯಿ, ಹೊಲಕ್ಕೆ ಹೊರಟಿದ್ದ ಬಸವಣ್ಣೆಮ್ಮ ಹೊರಪ್ಯಾಟಿ (55) ಎಂಬ ಮಹಿಳೆಯ ಎಡಗಾಲು ಮತ್ತು ಬಲಗೈಗೆ ಕಚ್ಚಿದೆ.
ಈ ಘಟನೆಯಲ್ಲಿ ಗಾಯಗೊಂಡವರ ಪೈಕಿ ಗೂಳಪ್ಪ ಹೋರಿ, ಮಂಜುನಾಥ, ಸಾಗರ್, ಶಫಿ ಎಂಬುವವರಿಗೆ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ.
ಆದರೆ, ತೀವ್ರವಾಗಿ ಗಾಯಗೊಂಡಿರುವ ಬಸವಣ್ಣೆಮ್ಮಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಉಳಿದ ಗಾಯಾಳುಗಳ ವಿವರ ಲಭ್ಯವಾಗಿಲ್ಲ.
ಔಷಧಿ ಕೊರತೆ: ನಾಯಿ ಕಚ್ಚಿದ ಸಂದರ್ಭದಲ್ಲಿ ನೀಡಲಾಗುವ ಔಷಧಿ ಅಳವಂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಭ್ಯ ಇಲ್ಲದೇ ಇರುವುದರಿಂದ ಗಾಯಾಗಳುಗಳನ್ನು ಜಿಲ್ಲಾ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಲಾಯಿತು ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.