ಹಾಸನ: `ಭಾರತವನ್ನು ಬಲಿಷ್ಠ ರಾಷ್ಟ್ರವಾಗಿಸಬೇಕಾದರೆ ಹಿಂದೂ ಅವಿಭಕ್ತ ಕುಟುಂಬ ಪದ್ಧತಿಯನ್ನು ಉಳಿಸಿಕೊಂಡು, ಹಿರಿಯ ನಾಗರಿಕರನ್ನೂ ಪ್ರೀತಿಯಿಂದ ಕಾಣುವುದು ಅಗತ್ಯ~ ಎಂದು ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್ ನುಡಿದರು.
ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ನಗರದ ಗವೇನಹಳ್ಳಿ ಬೈಪಾಸ್ ರಸ್ತೆ ಸಮೀಪದ ಚೈತನ್ಯ ಮಂದಿರ (ವೃದ್ಧಾಶ್ರಮ)ದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
`ಭಾರತ ಬಲಿಷ್ಠ ರಾಷ್ಟ್ರವಾಗುವಲ್ಲಿ ಅವಿಭಕ್ತ ಕುಟುಂಬ ಪದ್ಧತಿ ಪ್ರಮುಖ ಕಾರಣ ಎಂದು ದೇಶದ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಡಾ.ಎ .ಪಿ.ಜೆ. ಅಬ್ದುಲ್ ಕಲಾಂ ನುಡಿ ದಿದ್ದರು. ಇದನ್ನು ಅವರು ವಿದೇಶೀಯರಿಗೂ ಮನವರಿಕೆ ಮಾಡಿಕೊಟ್ಟಿದ್ದರು. ಕಿರಿಯರು ಹಿರಿಯ ನಾಗರಿಕರನ್ನು ಗೌರವಿಸಿ ಅವರ ಜತೆಯಲ್ಲೇ ಬಾಳುತ್ತ, ಜೀವನಾನುಭವವನ್ನು ಪಡೆಯಬೇಕು ಎಂದರು.
ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಟಿ. ಅಂಜನ್ ಕುಮಾರ್, ಹಿರಿಯ ನಾಗರಿಕರಿಗಾಗಿ ಸರ್ಕಾರ ರೂಪಿಸಿರುವ ವಿವಿಧ ಯೋಜನೆಗಳ ಮಾಹಿತಿ ನೀಡಿ ಇವುಗಳ ಲಾಭ ಪಡೆಯುವಂತೆ ವಿನಂತಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಸೆಶನ್ಸ್ ನ್ಯಾಯಾಧೀಶ ಕೆ.ಬಿ. ಚಂಗಪ್ಪ, `ಹಿರಿಯ ನಾಗರಿಕರನ್ನು ಗೌರವಿಸಿ, ಅವರಿಗೆ ಸಮಾಜದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಎಂಬ ಉದ್ದೇಶದಿಂದಲೇ ಸರ್ಕಾರ `ಹಿರಿಯ ನಾಗರಿಕರ ಕಾಯ್ದೆ-2007~ ಅನ್ನು ಜಾರಿ ಮಾಡಿದ್ದು ಇದರ ಬಗ್ಗೆ ಮಾಹಿತಿ ಸಂಗ್ರಹಿಸಿ ತಮ್ಮ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು. ಹಿರಿಯ ಪತ್ರಕರ್ತರಾದ ಗುಲಾಂ ಸತ್ತಾರ್ ಮತ್ತು ಎಚ್.ಜಿ. ಅನಂತರಾಮು, ನಿವೃತ್ತ ಶಿಕ್ಷಕರಾದ ಟಿ. ಜಯಲಕ್ಷ್ಮಮ್ಮ ಹಾಗೂ ನರಸಿಂಹಯ್ಯ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಪದಾಕಾರಿಗಳು ಪಾಲ್ಗೊಂಡಿದ್ದರು.