ನವದೆಹಲಿ (ಪಿಟಿಐ): ಸೀಮಾಂಧ್ರ ಭಾಗದ ಆರು ಕಾಂಗ್ರೆಸ್ ಸಂಸದರು, ಟಿಡಿಪಿ ಮತ್ತು ವೈಎಸ್ಆರ್ ಕಾಂಗ್ರೆಸ್ ಸಂಸದರು ನೀಡಿರುವ ಕೇಂದ್ರ ಸರ್ಕಾರದ ವಿರುದ್ಧ ನೀಡಿರುವ ಅವಿಶ್ವಾಸ ನೋಟಿಸನ್ನು ಚರ್ಚೆಗೆ ಕೈಗೆತ್ತಿಕೊಳ್ಳಲು ಶುಕ್ರವಾರವೂ ಸಾಧ್ಯವಾಗಲಿಲ್ಲ. ವಿವಿಧ ವಿಷಯಗಳ ಬಗ್ಗೆ ಉಂಟಾದ ಗದ್ದಲ ಸತತ ಐದನೇ ದಿನವೂ ಕಲಾಪವನ್ನು ನುಂಗಿ ಹಾಕಿತು.
ಯಾವುದೇ ಮಹತ್ವದ ಚರ್ಚೆ ನಡೆಯದೆಯೇ ಶುಕ್ರವಾರ ಕಲಾಪವನ್ನು ಮುಂದೂಡಲಾಯಿತು. ಸದನ ಆರಂಭವಾಗುತ್ತಿದ್ದಂತೆಯೇ ತೆಲಂಗಾಣದಿಂದ ಯುಪಿಎಸ್ಸಿ ಪರೀಕ್ಷೆಗಳವರೆಗಿನ ವಿವಿಧ ವಿಷಯಗಳ ಬಗ್ಗೆ ಸಂಸದರು ಗದ್ದಲ ಉಂಟು ಮಾಡಿದರು.
ಸದನದಲ್ಲಿ ಶಾಂತಿ ಕಾಪಾಡಿದರೆ ಮೂರು ಅವಿಶ್ವಾಸ ನೋಟಿಸ್ಗಳ ಬಗ್ಗೆ ನಿರ್ಧರಿಸಬಹುದು ಎಂಬ ಲೋಕಸಭಾಧ್ಯಕ್ಷೆ ಮೀರಾ ಕುಮಾರ್ ಅವರ ವಿನಂತಿಗೆ ಸದಸ್ಯರು ಸ್ಪಂದಿಸಲೇ ಇಲ್ಲ.
ಅವಿಶ್ವಾಸ ನೋಟಿಸ್ ಗಣನೆಗೆ ತೆಗೆದುಕೊಳ್ಳಬೇಕಾದರೆ ಕನಿಷ್ಠ 55 ಸಂಸದರು ಸಹಿ ಮಾಡಿರಬೇಕು. ಆದರೆ ಈಗ ಸಲ್ಲಿಸಲಾಗಿರುವ ನೋಟಿಸ್ಗೆ 13 ಸಂಸದರು ಮಾತ್ರ ಸಹಿ ಮಾಡಿದ್ದಾರೆ.