ಹಿರೇಕೆರೂರ: ತಾಲ್ಲೂಕಿನ ಚಿಕ್ಕೇರೂರು ಗ್ರಾಮದ ಮಧ್ಯ ಭಾಗದಲ್ಲಿರುವ ವಾಯವ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣವು ಅವ್ಯವಸ್ಥೆಯ ಆಗರವಾಗಿದೆ.
ಉದ್ಘಾಟನೆಯಾಗಿ ಹಲವು ತಿಂಗಳು ಕಳೆದರೂ ಪ್ರಯಾಣಿಕರ ಬಳಕೆಗೆ ಬರುತ್ತಿಲ್ಲ. ಡಾಂಬರೀಕರಣವಾಗದ ಆವರಣದಲ್ಲಿ ಕಲ್ಲುಗಳನ್ನು ಹರಡಿ ಹಾಗೇ ಬಿಡಲಾಗಿದೆ. ಇದರಿಂದ ಬಸ್ಸುಗಳು ನಿಲ್ದಾಣದ ಒಳಕ್ಕೆ ಬರುತ್ತಿಲ್ಲ.
ನೀರಿನ ವ್ಯವಸ್ಥೆ ಸೇರಿದಂತೆ ಯಾವುದೇ ಮೂಲ ಸವಲತ್ತುಗಳು ಕಾಣದೇ ನಿಲ್ದಾಣವು ಹಾಳು ಬಿದ್ದಂತೆ ಕಾಣುತ್ತಿದೆ.
ಈ ಎಲ್ಲ ಅವ್ಯವಸ್ಥೆಗಳನ್ನು ಸರಿಪಡಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿ ಕೊಡಲು ತುರ್ತುಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಗಿರೀಶ ಬಾರ್ಕಿ, ಗ್ರಾಮ ಘಟಕದ ಅಧ್ಯಕ್ಷ ಅರವಿಂದ ಬಳಿಗಾರ, ರಮೇಶ ದಂದೂರ, ಭರಮಪ್ಪ ಡಮ್ಮಳ್ಳಿ, ಕಿರಣ ಹಿಂಚಗೇರಿ, ರಮೇಶ ಚಕ್ರಸಾಲಿ ಮೊದಲಾದವರು ಒತ್ತಾಯಿಸಿದ್ದಾರೆ.